ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಯತ್ನ- ಬಿಜೆಪಿ ಕಾರ್ಯಕ್ರರ್ತರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ ಪೊಲೀಸರು

ವಿಜಯಪುರ: ವಿಧಾನ ಸಭೆಯಲ್ಲಿ ರಾಜ್ಯಸಭೆ ಕಾಂಗ್ರೆಸ್ ನೂತನ ಸದಸ್ಯನ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಆರೋಪಿತರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗುಮ್ಮಟ ನಗರಿ ವಿಜಯಪುರದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ದೇಶ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಹಾಕಿದ ನೂರಾರು ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್. ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಪಾಕಿಸ್ತಾನ ಹೆಸರು ಹೇಳಲು ಸಹ ನಮಗೆ ಅಸಹ್ಯವಾಗುತ್ತದೆ.  ಇಂಥ ಸಂದರ್ಭದಲ್ಲಿ ನಮ್ಮ ನಾಡಿನ ಪವಿತ್ರ ಪ್ರಜಾಪ್ರಭುತ್ವ ದೇಗುಲ ವಿಧಾನಸೌಧದದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವುದು ಖಂಡನಾರ್ಹ.  ಕಾಂಗ್ರೆಸ ತೀರಾ ಲಜ್ಜಗೆಟ್ಟಿದೆ.  ದೇಶಭಕ್ತಿ ಸಹ ಆ ಪಕ್ಷಕ್ಕೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನಿ ಏಜೆಂಟನಂತೆ ಕಾಂಗ್ರೆಸ್ ನಾಯಕರು ವರ್ತಿಸುತ್ತಿದ್ದಾರೆ.  ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಹೊರಹಾಕಿದ್ದರೆ, ಡಿಸಿಎಂ ಡಿ. ಕೆ. ಶಿವಕುಮಾರ ಅವರನ್ನು ಮಂಗಳೂರು ಕುಕ್ಕರ್ ಪ್ರಕರಣದಲ್ಲಿ ಆರೋಪಿಗಳನ್ನೇ ತಮ್ಮ ಬ್ರದರ್ ಎಂದು ಹೇಳಿದ್ದರು.  ಈಗ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವುದನ್ನು ನೋಡಿದರೆ ಕಾಂಗ್ರೆಸ್ ಅಸಹ್ಯಕರವಾಗಿ ವರ್ತಿಸುತ್ತಿದೆ ಎಂದು ಹೇಳಿದರು.

ಭಾರತ ಭೂಮಿ ಪರಮ ಪವಿತ್ರ, ಈ ಭೂಮಿಯಲ್ಲಿದ್ದುಕೊಂಡು ಅನ್ಯ ಅದು ಪಾಕ್ ಜಿಂದಾಬಾದ್ ಎಂದು ಹೇಳಿದವರಿಗೆ ಕಠಿಣಾತೀಕಠಿಣ ಶಿಕ್ಷೆ ನೀಡಬೇಕು, ಉಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಪಾಕಿಸ್ತಾನ ಪರ ಘೋಷಣೆ ಹಾಕಿದ ಬುದ್ಧಿಗೇಡಿ, ಲಜ್ಜೆಗೆಟ್ಟ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕು.  ಪಾಕಿಸ್ತಾನದ ಹೆಸರು ಅವರ ನಾಲಿಗೆಯಲ್ಲಿ ಅಲ್ಲ ಮನಸ್ಸಿನಲ್ಲಿಯೂ ಬರದಂತೆ ಕಠಿಣ ಶಿಕ್ಷೆ ನೀಡಬೇಕು.  ಕಾಂಗ್ರೆಸ್ ನಾಯಕರ ವರ್ತನೆ ಮಿತಿಮೀರಿದೆ.  ರಾಷ್ಟ್ರ ಪುರುಷರಾದ ಅಬ್ದುಲ್ ಕಲಾಂ, ಅಷ್ಪಾಕ್ ಉಲ್ಲಾಖಾನ್ ಅವರಂಥ ನಾಯಕರನ್ನು ಪ್ರೇರಣೆಯಾಗಿ ಇಟ್ಟುಕೊಳ್ಳದೆ ಮತಾಂದ ರಾಷ್ಟ್ರ ವಿರೋಧಿ ಸಂಘಟನೆಗಳ ಜೊತೆಗೂಡಿ ಇದೇ ರೀತಿ ದೇಶವಿರೋಧಿ ಹೇಳಿಕೆ, ದೇಶ ವಿರೋಧಿ ನಿಲುವು ತಾಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ ಮಾತನಾಡಿ, ಪಾಕಿಸ್ತಾನ ಪರ ಘೋಷಣೆ ಹಾಕಿರುವ ವ್ಯಕ್ತಿಯ ಪೂರ್ವಾಪರ ತನಿಖೆಯಾಗಬೇಕು.  ಆ ವ್ಯಕ್ತಿ ವಿಧಾನಸೌಧ ಪ್ರವೇಶಿಸಲು ಪಾಸ್ ನೀಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಂಕರ ಹೂಗಾರ, ಮಂಜುನಾಥ ಮಿಸೆ, ಬಸವರಾಜ ಬಿರಾದಾರ,ಪ್ರೇಮಾನಂದ ಬಿರಾದಾರ, ಕಿರಣ್ ಪಾಟೀಲ್ ರಾಜೇಶ ತವಸೆ, ಮಹೇಶ್ ಒಡಿಯರ್, ಚಿದಾನಂದ ಚಲವಾದಿ ಶ್ರೀಕಾಂತ ಶಿಂಧೆ, ವಿಜಯ ಜೋಶಿ, ಚಂದ್ರು ಚೌದ್ರಿ, ಪಾಪುಸಿಂಗ ರಜಪೂತ, ಸಂತೋಷ ಕುಬದಡ್ಡಿ, ಆನಂದ ಮುಚ್ಚಂಡಿ, ರಾಮಚಂದ್ರ ಚವ್ಹಾಣ, ಪ್ರಶಾಂತ ಅಗಸರ, ಪರಶುರಾಮ, ನಾಗೇಶ, ರವಿ ಚವ್ಹಾಣ, ಪ್ರೇಮ ಬಿರಾದಾರ ದಶರಥ ಕಾಂಬಳೆ, ವಿಠ್ಠಲ ನಡುವಿನಕೆರೆ ಜಗದೀಶ ಮುಚ್ಚಂಡಿ ವಿನಾಯಕ ಗೌಳಿ ಸತಾರ ಕೋಲಾರ, ಸಚಿನ ಕುಮ್ಸಿ, ವಿನೋದ ಮಣೂರ, ವಿನೋದ ತೆಲಸಂಗ, ಸಚಿನ ಬಂಬಳೆ, ಸಂತೋಷ ಕುರದಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಈ ಮಧ್ಯೆ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ತಡೆದ ಪೊಲೀಸರು ಅವರನ್ನು ತಡೆದರು.  ಆಗ ಪರಸ್ಪರ ವಾಗ್ವಾದ ಮತ್ತು ತಳ್ಳಾಟ ನಡೆಯಿತು.  ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.

Leave a Reply

ಹೊಸ ಪೋಸ್ಟ್‌