ಡಾ. ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಯಶಸ್ಸು ನಿಶ್ಚಿತ- ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಅಭಿಮತ

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ನಡೆದು ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ.  ಅದಕ್ಕೆ ನಾನೇ ಜೀವಂತ ಉದಾಹರಣೆ ಎಂದು ಕರ್ನಾಟಕ ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಹೇಳಿದ್ದಾರೆ.

ಬೌದ್ಧ ವಿಹಾರ ನಿರ್ಮಾಣ ಸಮಿತಿ ವತಿಯಿಂದ ನಗರದ ಸಾರಿಪುತ್ರ- ಬೋಧಿಧಮ್ಮ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

2016ರಿಂದ ಬುದ್ಧವಿಹಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಅವರು, ಇಲ್ಲಿ ತಾವು ಬಹಳಷ್ಟು ಜೀವನಮಾರ್ಗವನ್ನು ಕಲಿತಿರುವುದನ್ನು ಸ್ಮರಿಸಿದರು.  ಭಗವಾನ ಬುದ್ಧರು ಮತ್ತು ಡಾ. ಬಾಬಾಸಾಹೇಬರ ವಿಚಾರಗಳಿಂದ ಪ್ರೇರಿತನಾಗಿ, ಅವರ ಮಾರ್ಗದಲ್ಲಿ ಒಂದು ಸಣ್ಣ ಹೆಜ್ಜೆ ಇರಿಸಿದ್ದರ ಪರಿಣಾಮವೇ ನಾನಿಂದು ನ್ಯಾಯಾಧೀಶನಾಗಲು ಕಾರಣವಾಗಿದೆ.  ಆ ಮಾರ್ಗದಲ್ಲಿ ಸಂಪೂರ್ಣವಾಗಿ ನಡೆದರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ಅರಿತಿದ್ದೇನೆ.  ನನ್ನ ಸೇವಾವಧಿಯಲ್ಲಿ ಇದೆ ಮಾರ್ಗದಲ್ಲಿ ನಡೆದು ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ಅವರು ಹೇಳಿದರು.

ನನ್ನ ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನ ಮಾಡಿದ ಬುದ್ಧ ವಿಹಾರ ನಿರ್ಮಾಣ ಸಮಿತಿಯ ಎಲ್ಲ ಸದಸ್ಯರನ್ನು ಎಂದಿಗೂ ಮರೆಯಲಾಗದು.  ನಾನು ವಕೀಲಿ ವೃತ್ತಿ ಆರಂಭಿಸಿದಾಗ ಎಲ್ಲ ಹಿರಿಯ ನ್ಯಾಯವಾದಿಗಳು ಸಹಕಾರ ಮತ್ತು ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಅವರನ್ನು ಬುದ್ಧವಿಹಾರದ ವತಿಯಿಂದ ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಶಿಕ್ಷಣದ ಮೂಲಕ ಒಬ್ಬ ವ್ಯಕ್ತಿಯು ಸಾಧನೆಯ ಶಿಖರವನ್ನೇರಬಹುದು ಎಂಬುದನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ತೋರಿಸಿದ್ದಾರೆ.  ಅವರು ಬರೆದ ಸಂವಿಧಾನವೇ ದೇಶದ ಶ್ರೇಷ್ಠ ಗ್ರಂಥ.  ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಬೌದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಛಲದೊಂದಿಗೆ ತಮ್ಮ ಗುರಿಯನ್ನು ಸಾಧಿಸಿದ ಜಹೀರ ಅತನೂರ ಅವರಿಗೆ ಉಜ್ವಲ ಭವಿಷ್ಯವಿದೆ.  ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕುವಂತೆ ಅವರು ಕೆಲಸ ಮಾಡಿ, ಉನ್ನತ ಹುದ್ದೆಗೆ ಏರಲಿ ಎಂದು ಶುಭ ಹಾರೈಸಿದರು.

ಇದಕ್ಕೂ ಮುಂಚೆ ನಡೆದ ನ್ಯಾಯವಾದಿ ಕೆ. ಎಫ್. ಅಂಕಲಗಿ ಅವರು ಭಗವಾನ ಬುದ್ಧ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದರು.

ಬುದ್ಧವಿಹಾರದ ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಜಿ. ಎ. ಅತನೂರ, ಎಂ. ಡಿ. ಇಂಡಿಕರ, ಚಿದಾನಂದ ನಿಂಬಾಳ, ಕೆ. ಎಂ. ಕೂಡಲಗಿ, ಬಾಬು ಗುಂಡಳ್ಳಿ, ಜಾಫರ ಅಂಗಡಿ, ಸುರೇಶ ಚೂರಿ, ವಿಲಾಸ ವ್ಯಾಸ, ಮಲ್ಲು ಬನಸೋಡೆ, ರವಿ ಕಿತ್ತೂರ, ರಾಜು ತೊರವಿ, ಅನಿಲ ಹೊಸಮನಿ, ಸಿದ್ದು ಬಿರಾದಾರ, ಈಶ್ವರ ಕಾರಜೋಳ, ಸಂತೋಷ ಸುತಗುಂಡಿ, ಬಿ. ಆರ್. ತಳಕೇರಿ, ಸಂಘರ್ಷ ಹೊಸಮನಿ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಬುದ್ಧವಿಹಾರ ನಿರ್ಮಾಣದ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ರಮೇಶ ಹಾದಿಮನಿ ಸ್ವಾಗತಿಸಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌