ಈ ವರ್ಷ ನೇತ್ರಬಾಧೆ ಕಾಡಲಿದೆ- ಕೀಟಕಾಟ ಹೆಚ್ಚಾಗಲಿದೆ- ಜಾತಿಕಲಹ, ಯೋಧರಿಗೆ ನೋವು, ಉತ್ತಮರಿಗೆ ರಾಜಕೀಯ ಲಾಭವಿದೆ- ಹೊಳೆಬಬಲಾದಿ ಕಾರ್ಣಿಕರ ಭವಿಷ್ಯವಾಣಿ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಸ್ಥಾನದ ಕಾರ್ಣಿಕ ಶ್ರೀ ಸಿದ್ಧಾರಮಯ್ಯ ಹೊಳಿಮಠ 2024 ನೇ ವರ್ಷದ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. 

ಸದಾಶಿವ ಮುತ್ಯಾರ ಮಠದಲ್ಲಿ ನುಡಿಯಲಾಗುವ ಕಾಲಜ್ಞಾನ ಭವಿಷ್ಯ ನಿಜವಾಗುವುದರಿಂದ ಈ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.  ಅದರಂತೆ ಈ ವರ್ಷದ ಕಾಲಜ್ಞಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಶ್ರೀಮಠದ ಪೀಠಾಧಿಪತಿಗಳು ಮತ್ತು ಕಾರ್ಣಿಕರೂ ಆಗಿರುವ ಈ ಬಾರಿಯೂ ಕಾಲಜ್ಞಾನದ ಭವಿಷ್ಯ ನುಡಿದಿದ್ದು, ಕ್ರೋಧಿನಾಮ ಸಂವತ್ಸರದಲ್ಲಿ ಕೋಪ ಹೆಚ್ಚಾಗುತ್ತದೆ.  ಸಿಟ್ಟಿನವರು ಹೆಚ್ಚಾಗುತ್ತಾರೆ.  ಬೆಳೆಗಳಿಗೆ ಕೀಟ ಬಾಧೆ ಹೆಚ್ಚಾಗಲಿದೆ.  ಈ ಬಾರಿ ಮಳೆ ಸಾಧಾರಣವಾಗಿರಲಿದೆ.  ವ್ಯಾಪಾರಸ್ಥರಿಗೆ ಮಧ್ಯಮ ಫಲವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಳೆ ಬೆಳೆ ಫಲ ಸಸಿಗಳು ಖಂಡ ಮಂಡಳವಾಗುತ್ತದೆ.  ಶಿಶುಗಳಿಗೆ ಆರೋಗ್ಯ ಬಾಧೆ ಹೆಚ್ಚಾಗುತ್ತದೆ.  ಕುಲ ಮತ್ತು ಜಾತಿಗಳಲ್ಲಿ ಕಲಹ ಜಾಸ್ತಿಯಾಗಲಿದೆ.  ಧವಸ ಧಾನ್ಯಗಳು, ರಸಗಳು ಮಾರಾಟವಾಗುತ್ತವೆ.  ಉತ್ತರ ಭಾಗಕ್ಕೆ ಬರಗಾಲ ಮತ್ತು ಕೇಡು ಉಂಟಾಗಲಿದೆ.  ದೊಡ್ಡ ದೊಡ್ಡ ಮಹಾಜನರ ಯೋಗ ಅಳಿಯಲಿದೆ.  ಅಲ್ಲಲ್ಲಿ ರಾಜಕೀಯ ಗೊಂದಲ ಉಂಟಾಗುತ್ತವೆ ಎಂದೂ ಅವರು ತಿಳಿಸಿದ್ದಾರೆ.

ಅವರವರಲ್ಲಿಯೇ ಕಾಳು ಎಳೆಯುವವರು ಹೆಚ್ಚಾಗುತ್ತಾರೆ.  ಆಡಂಬರದ ಜೀವನ ನಡೆಸುುವ ಜನರಿಗೆ ಸಾಲಬಾಧೆ ಎದುರಾಗುತ್ತದೆ.  ಆಹಾರ ಪದಾರ್ಥಗಳಾದ ಸಕ್ಕರೆ, ಬೆಣ್ಣಿ, ಕುಸುಬೆ ಬೆಲೆ ಹೆಚ್ಚಾಗುತ್ತವೆ ಎಂದು ಅವರು ಹೇಳಿರುವುದು ಈ ಬಾರಿ ಕಬ್ಬು ಬೆಳೆಯ ಇಳುವರಿ ಕುಸಿತ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.  ಅಲ್ಲದೇ, ಹೈನೋದ್ಯಮದಲ್ಲಿಯೂ ಉತ್ಪಾದನೆ ಕುಸಿಯಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.  ಅಲ್ಲದೇ, ಎಣ್ಣೆ ಪದಾರ್ಥಗಳ ಉತ್ಪಾದನೆಯ ಮೇಲೂ ಮಳೆಯ ಪರಿಣಾಣ ಉಂಟಾಗಲಿದ್ದು, ಅವುಗಳ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆ ಉಂಟಾಗುವ ಮುನ್ಸೂಚನೆ ಈ ಬಾರಿಯ ಕಾಲಜ್ಞಾನ ಭವಿಷ್ಯದಲ್ಲಿ ಅಡಗಿದೆ ಎಂದು ಹೇಳಲಾಗುತ್ತಿದೆ.

ಈ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ಸುದ್ದಿಯನ್ನೂ ವೀಕ್ಷಿಸಿ

ಧರ್ಮಗಳ ಮತ್ತೆ ಕಿತ್ತಾಟ

ಧರ್ಮ ಧರ್ಮಗಳ ನಡುವೆ ಕಿತ್ತಾಟವಾಗುತ್ತದೆ.  ಉತ್ತಮ ಮತ್ತು ಅರ್ಹ ವ್ಯಕ್ತಿಯ ಮರ್ದನವಾಗುತ್ತದೆ.  ಗಡಿ ಕಾಯುವ ಯೋಧರಿಗೆ ನೋವಿದೆ ಎಂದು ಹೇಳುವ ಮೂಲಕ ಈ ವರ್ಷದ ಎದುರಾಗಬಹುದಾದ ದರ್ಮ ದಂಗಲ್, ಖ್ಯಾತ ವ್ಯಕ್ತಿಗೆ ಕಂಟಕವಿದೆ.  ಅಲ್ಲದೇ, ಗಡಿಯಲ್ಲಿ ಘರ್ಷಣೆ ಅಥವಾ ಯುದ್ಧ ಭೀತಿಯ ಬಗ್ಗೆಯೂ ಕಾರ್ಣಿಕರು ಮುನ್ಸೂಚನೆ ನೀಡಿದ್ದಾರೆ.

ರಾಜಕೀಯದಲ್ಲಿ ಉತ್ತಮ ವ್ಯಕ್ತಿಯ ಗೆಲುವು, ನೇತ್ರಬಾಧೆ ಎಚ್ಚರಿಕೆ

ಇದೇ ವೇಳೆ ರಾಜಕೀಯದಲ್ಲಿ ಉತ್ತಮ ವ್ಯಕ್ತಿಯ ಗೆಲುವಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರದಲ್ಲಿ ಉತ್ತಮ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ.  ಈ ಬಾರಿ ಕಣ್ಣಿನ ಖಾಯಿಲೆಗಳು ಹೆಚ್ಚಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಶಾಂತಿ, ನೆಮ್ಮದಿ, ಭಯೋತ್ಪಾದನೆ, ಪ್ರಾಕೃತಿಕ ವಿಪತ್ತು ಭವಿಷ್ಯ

ಈ ಮಧ್ಯೆ, ಜೇಷ್ಠ ಮಾಸದಲ್ಲಿ ನೆಮ್ಮದಿ, ಶಾಂತಿ ಮತ್ತು ಯಶಸ್ಸು ಸಿಗುತ್ತದೆ.  ನಂತರ ಭಯೋತ್ಪಾದನೆ ಹಾಗೂ ನೈಸರ್ಗಿಕ ಎದುರಾಗಬಹುದು ಎಂಬುದನ್ನು ಹೊಸ ಸುಳಿವು ತಿಳಿಯದಣ್ಣ ಎಂದು ಕಾರ್ಣಿಕರು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ.

ಲಿಂಗ ಸಮಾನತೆ ಎಲ್ಲರೂ ಒಂದೇ ಎನ್ನೋ ಕಾಲ ಬಂದಿತಣ್ಣಾ.  ಐದಾಣೆ ಮಳೆ, ನಾಲ್ಕಾಣೆ ಬೆಳೆಯಾಗುತ್ತದೆ ಎಂದು ಹೇಳುವ ಮೂಲಕ ಮಳೆಗಿಂತ ಕಡಿಮೆ ಬೆಳೆಗಳ ಉತ್ಪಾದನೆಯಾಗಲಿದೆ ಎಂದು ಶ್ರೀ ಸಿದ್ಧರಾಮಯ್ಯ ಹೊಳಿಮಠ ಕಾರ್ಣಿಕರು ಸಹಸ್ರಾರು ಭಕ್ತರ ಎದುರು ಕಾಲಜ್ಞಾನದ ಹೊತ್ತಿಯ ಆಧರಿಸಿ 2024ನೇ ವರ್ಷದ ಮಳೆ, ಬೆಳೆ, ವಿದ್ಯಮಾನಗಳ ಭವಿಷ್ಯ ನುಡಿದಿದ್ದಾರೆ.

Leave a Reply

ಹೊಸ ಪೋಸ್ಟ್‌