Video News: ಪಿಎಸ್ಐ ಆಗಬೇಕೆಂದಿದ್ದೆ, ಊರ ಗೌಡರು ರಾಜಕಾರಣಿ ಮಾಡಿದರು- ಓಟಿಎಸ್ ಸಾಲ ಪಡೆದ ರೈತರ ಪರ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ- ರಮೇಶ ಜಿಗಜಿಣಗಿ

ವಿಜಯಪುರ: ಡಿಗ್ರಿ ಮುಗಿಸಿದ ಮೇಲೆ ಪಿಎಸ್‌ಐ ಆಗಬೇಕೆಂದುಕೊಂಡಿದ್ದೆ.  ಆದರೆ, ಊರ ಗೌಡರ ಒತ್ತಾಯದ ಹಿನ್ನೆಲೆ ರಾಜಕೀಯ ಪ್ರವೇಶಿಸಿ ಆರು ಬಾರಿ ಸಂಸದನಾಗಿದ್ದೇನೆ ಎಂದು ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಇಂಡಿ ಪಟ್ಟಣದಲ್ಲಿ ಬಿಜೆಪಿ ಚುನಾವಣೆ ನಿರ್ವಹಣೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಿ.ಎ ಮುಗಿದ ಮೇಲೆ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ತೆರಳಿದ್ದೆ.  ಆಗ ಊರ ಗೌಡರು ನಮ್ಮೂರಿನ ದಲಿತ ವಿದ್ಯಾವಂತ ಯುವಕ ಪಿಎಸ್‌ಐ ಆದರೆ ಸಾಲದು.  ಜನಪ್ರತಿನಿಧಿಯಾಗಿ ಇನ್ನಷ್ಟು ಸೇವೆ ಮಾಡಬೇಕು ಎಂದು ಒತ್ತಾಯಿಸಿ ನನ್ನನ್ನು ರಾಜಕೀಯಕ್ಕೆ ಕರೆತಂದರು.  ಮಾಜಿ ಸಿಎಂ ದಿ. ರಾಮಕೃಷ್ಣ ಹೆಗಡೆ ಅವರು ನನ್ನನ್ನು ಗುರುತಿಸಿ ಸಚಿವರನ್ನಾಗಿ ಮಾಡಿದರು.  ಜೆ. ಎಚ್. ಪಟೇಲ್ ಸೇರಿದಂತೆ ಜನತಾ ಪರಿವಾರದವರು ನನಗೆ ಹೆಚ್ಚಿನ ಜವಾಬ್ದಾರಿ ನೀಡಿ ಪ್ರೋತ್ಸಾಹಿಸಿದರು ಎಂದು ಅವರು ಹೇಳಿದರು.

ಮೌಲ್ಯಯುತ ರಾಜಕಾರಣದಿಂದಾಗಿ ಈಗ ಆರು ಬಾರಿ ಸಂಸದನಾಗಿದ್ದೇನೆ.  7ನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಬಿಜೆಪಿ ಮತ್ತೆ ನನಗೆ ಟಿಕೆಟ್ ನೀಡಿದೆ.  ಮೋದಿ ಅವರನ್ನು ಮತ್ತೋಮ್ಮೆ ಪ್ರಧಾನಿ ಮಾಡುವ ಅಗತ್ಯವಿದೆ.  10 ವರ್ಷಗಳಲ್ಲಿ ಅವರು ಅಗಾಧವಾದ ಅಭಿವೃದ್ಧಿ ಮಾಡಿದ್ದು ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ಮತ್ತಷ್ಟು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಲು ಪಣತೊಟ್ಟಿದ್ದಾರೆ.  ನಾನೂ ಕೂಡ ಗೆಲ್ಲುವ ಮೂಲಕ ಅವರ ಅಭಿವೃದ್ಧಿ ಪರ ಯೋಜನೆಗಳಿಗೆ ಕೈಜೋಡಿಸಲಿದ್ದೇನೆ ಎಂದು ಸಂಸರು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ವಿಡಿಯೋ ಬೈಟ್:

https://www.youtube.com/watch?v=c80YOYnS-As

 

ಪ್ರಧಾನಿ, ಹಣಕಾಸು ಸಚಿವೆ, ಆರ್ ಬಿ ಐ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ

ರೈತರು ಸಾಲ ತುಂಬದ ಕಾರಣ ಕಟಬಾಕಿದಾರರಾದ ನಂತರ ಬ್ಯಾಂಕಿನವರು ಅವರಿಗೆ ಓಟಿಎಸ್ ಅಂದರೆ ಒನ್ ಟೈಮ್ ಸೆಟಲಮೆಂಟ್ ಅರ್ಥಾತ್ ಒಂದು ಬಾರಿಗೆ ಪರಿಹಾರದ ರೂಪದಲ್ಲಿ ರೈತರಿಂದ ಸಾಲವನ್ನು ಒಂದೇ ಬಾರಿಗೆ ಕಟ್ಟಿಸಿಕೊಳ್ಳುತ್ತಾರೆ.  ಆದರೆ, ಆ ರೈತರಿಗೆ ಮುಂದಿನ 10 ವರ್ಷಗಳ ವರಗೆ ಸಾಲ ಪಡೆಯಲು ಅವಕಾಶ ನೀಡುವುದಿಲ್ಲ.  ಇದರಿಂದ ರೈತರಿಗೆ ತೊಂದರೆಯಾಗುತ್ತದೆ.  ಅಲ್ಲದೇ, ಬ್ಯಾಂಕುಗಳಿಗೂ ತೊಂದರೆಯಾಗುತ್ತದೆ.  ಈ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ ಬಿ ಐ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.  ಆದರೆ, ಈವರೆಗೂ ಯಾರೂ ಉತ್ತರ ನೀಡಿಲ್ಲ ಎಂದು ಇದೇ ವೇಳೆ ಅವರು ಬೇಸರ ವ್ಯಕ್ತಪಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದಲ್ಲಿ ಕಂದಾಯ ಸಚಿವನಾಗಿದ್ದಾಗ ಹಿರಿಯರ ಸೂಚನೆಯಂತೆ ಚಿಕ್ಕೋಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಅಂದಿನ ಪ್ರಭಾವಿ ರಾಜಕಾರಣಿ ವಿರುದ್ಧ ಭರ್ಜರಿಯಾಗಿ ಜಯಗಳಿಸಿದೆ.  ಸತತ ಮೂರು ಬಾರಿ ಚಿಕ್ಕೋಡಿಯಿಂದ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದೇನೆ.  ಈಗ ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರದಿಂದ ಕೂಡ ಸತತ ಮೂರು ಬಾರಿ ಬಿಜೆಪಿಯಿಂದ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದೇನೆ.  ಈಗ ನಾಲ್ಕನೇ ಬಾರಿಗೂ ಮತ್ತೆ ವಿಜಯಪುರದಿಂದ ಗೆಲ್ಲುವುದು ನಿಶ್ಚಿತ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಮುಖಂಡರಾದ ಅಶೋಕ ಅಲ್ಲಾಪುರ, ಕಾಸುಗೌಡ ಬಿರಾದಾರ ಮಾತನಾಡಿದರು.

ಈ ವೇಳೆ ಮುಖಂಡರಾದ ಶೀಲವಂತ ಉಮರಾಣಿ, ಚಂದ್ರಶೇಖರ ಕವಟಗಿ, ಮಲ್ಲುಗೌಡ ಬಿರಾದಾರ, ಬಿ. ಎಸ್. ಪಾಟೀಲ, ಶ್ರೀಪತಿಗೌಡ ಬಿರಾದಾರ, ವೆಂಕಟೇಶ ಕುಲಕರ್ಣಿ, ಸಿದ್ದಲಿಂಗ ಹಂಜಗಿ, ಹಣಮಂತ್ರಾಯಗೌಡ ಪಾಟೀಲ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ರಾಜಕುಮಾರ ಸಗಾಯಿ, ಮಳ್ಳುಗೌಡ ಪಾಟೀಲ, ಶ್ರೀಕಾಂತ ದೇವರ, ಎಸ್. ಎ. ಪಾಟೀಲ, ವಿ. ಎಚ್. ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌