ದಿನೇಶ ಗುಂಡೂರಾವ ವಿರುದ್ಧ ಯತ್ನಾಳ ವಾಗ್ದಾಳಿ- ಮೋದಿ ಪ್ರಧಾನಿ ಮಾಡಲು ಭಿನ್ನಮತ ಮರೆತು ಪ್ರಚಾರ ಮಾಡುತ್ತೇವೆ ಎಂದ ಶಾಸಕ

ವಿಜಯಪುರ: ಶಾಸಕ ದಿನೇಶ ಗುಂಡೂರಾವ ಅವರ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆ ನಡೆಸಿರುವ ವಿಚಾರದ ಕುರಿತು ದಿನೇಶ ಗುಂಡೂರಾವ ಮಾಡಿರುವ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ನಮ್ಮ ಪದಾಧಿಕಾರಿ ಮೊಬೈಲ್ ಸಿಮ್ ವ್ಯಾಪಾರಿಗಳಿದ್ದಾರೆ.  ಅವರ ಬಳಿ ಯಾರು ಬಂದಿರುತ್ತಾರೆ ಎಂಬುದು ಹೇಗೆ ಗೊತ್ತಾಗುತ್ತದೆ? ಬಿಜೆಪಿಯೇ ಇರಲಿ ಕಾಂಗ್ರೆಸ್ಸಿನವರೇ ಇರಲಿ ಯಾರೇ ಇರಲಿ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾನೆ ಎಂದು ತಿಳಿಸಿದರು.

ಈ ಕುರಿತು ಸಚಿವ ಗುಂಡುರಾವ್ ಟ್ವೀಟ್ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಚಿವ ಗುಂಡುರಾವ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ.  ಗುಂಡುರಾವ್ ದೇಶ ವಿರೋಧಿ ಹೇಳಿಕೆ ಕೊಡೋದು ಚಟವಾಗಿದೆ ಎಂದು ವಾಗ್ದಾಳಿ ನಡೆಸಿದ

ಇದೇ ವೇಳೆ ಬಿಜೆಪಿ ಸ್ಟಾರ್ ಪ್ರಚಾರಕರಾಗಿರೋ ಯತ್ನಾಳ ಕರಾವಳಿ ಭಾಗದಲ್ಲಿ ತಾವು ಪ್ರಚಾರ ನಡೆಸಿದ್ದು, ಈ ಭಾಗದಲ್ಲಿ ಎಲ್ಲ ಮೂರು ಲೋಕಸಭೆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ.  ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ನಾವು ನೂರಕ್ಕೆ ನೂರು ಗೆಲ್ಲುತ್ತೇವೆ.  ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಅನಿವಾರ್ಯ ಮತ್ತು ಅವಶ್ಯ ಎಂಬುದು ಸಾಮಾನ್ಯ ಮತದಾರರಿಗೂ ಅನಿಸಿದೆ ಎಂದು ತಿಳಿಸಿದರು.

ಅಸಮಾಧಾನ ಬದಿಗೊತ್ತಿ ಮೋದಿ ಪರ ಪ್ರಚಾರ

ಬಿಜೆಪಿಯ ಕೆಲ ಕಾರ್ಯಕರ್ತರಲ್ಲಿ ಅಸಮಾಧಾನ ಅಭ್ಯರ್ಥಿಗಳು ಮತ್ತು ನಾಯಕರ ಬಗ್ಗೆ ಇದ್ದರೂ ಕೂಡ ಎಲ್ಲರೂ ದೇಶದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಬಿಜೆಪಿ ಗೆಲ್ಲಿಸುತ್ತಾರೆ.  ರಾಜ್ಯದ ಎಲ್ಲ 28 ಮತಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಇಸ್ ಬಾರ್ ಚಾರ್ ಸೌ ಪಾರ್ ಎಂಬ ಬಿಜೆಪಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೋದಿ ಅವರು ಇಂದು ಇಡೀ ದೇಶಕ್ಕೆ ಅನಿವಾರ್ಯವಾಗಿದ್ದಾರೆ.  ಇಡೀ ದೇಶದಲ್ಲಿ ಒಂದು ವಾತಾವರಣ ಇದೆ.  ಮೋದಿ ಅವರು ಇಂದು ಅನಿವಾರ್ಯ ಇದ್ದಾರೆ.  ಮೋದಿ ಅವರನ್ನು ಆಯ್ಕೆ ಮಾಡದೇ ಇದ್ದರೆ ನಾವು ಉಳಿಯುವದಿಲ್ಲ ಎಂಬ ಭಾವನೆ ದೇಶದ ಜನರಲ್ಲಿ ಬಂದಿದೆ.  ಹೀಗಾಗಿ ಈ ಬಾರಿ 400 ಪಾರ್ ಆಗತ್ತೋ 500 ಕ್ಕೆ ಹೋಗಿ ಹತ್ತತ್ತೋ ಗೊತ್ತಿಲ್ಲ ಎಂದು ಅವರು ಹೇಳಿದರು.

ವಿಜಯಪುರ ನಗರದ ಯುವ ಮುಖಂಡ ಹರ್ಷಗೌಡ ಪಾಟೀಲ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ವ್ಯಂಗ್ಯವಾಡಿದ ಅವರು, ಇದನ್ನೆಲ್ಲಾ ನೋಡಿ ಬಿಟ್ಟಿದ್ದೇವೆ.  ಇಲ್ಲೊಬ್ಬ ಬಿಜೆಪಿಯ ಅಭ್ಯರ್ಥಿ ಇದ್ದಾನೆ.  ಬಸವನ ಬಾಗೇವಾಡಿಯಲ್ಲಿ ಯಾಕೆ ಬಿಜೆಪಿಯ‌ ಪರ ಪ್ರಚಾರ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಶಿವಾನಂದ ಎಸ್. ಪಾಟೀಲ ವಿರುದ್ಧ ಮತ್ತು ಅಲ್ಲಿನ ಬಿಜೆಪಿ ಅಭ್ಯರ್ಥಿ ಪರ ಯಾಕೆ ಈ ಅಭ್ಯರ್ಥಿ ಪ್ರಚಾರ ಮಾಡಲಿಲ್ಲ? ಬಬಲೇಶ್ವರ ಮತಕ್ಷೇತ್ರದಲ್ಲಿ ನನ್ನ ಪರ ಯತ್ನಾಳ ಸರಿಯಾಗಿ ಪ್ರಚಾರ ಮಾಡಿಲ್ಲ ಎಂದು ಬಿಜೆಪಿ ಮುಖಂಡ ಆರೋಪ ಮಾಡಿದ್ದಾರೆ.  ಆತ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಕೆ. ಬೆಳ್ಳುಬ್ಬಿಗೆ ಮತ ಹಾಕಿ ಎಂದು ಯಾಕೆ ಹೇಳಲಿಲ್ಲ ಎಂದು ಅವರು ಪ್ರಶ್ನಿಸಿದರು.

ಒಂದು ಕುಟುಂಬದಲ್ಲಿ ಒಂದೇ ಮನೆಯಲ್ಲಿ ಒಂದೇ ಉದ್ಯೋಗ ಮಾಡಿಕೊಂಡು ಜೀವನ ಮಾಡುವವರು ಒಬ್ಬ ಕಾಂಗ್ರೆಸ್ಸಿನಲ್ಲಿ ಇರುತ್ತಾರೆ.  ಮತ್ತೋಒಬ್ಬ ಬಿಜೆಪಿಯಲ್ಲಿ ಇರ್ತಾರೆ.  ಇವರು ಬಿಜೆಪಿಯ ಲಾಭ ಪಡೆಯುವವರು.  ಅವರಿಂದ ಪಕ್ಷಕ್ಕೆ ಲಾಭವಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌