ಬಿಜೆಪಿಯ ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದಿದೆ- ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ- ಶಾಸಕ ಯತ್ನಾಳ

ವಿಜಯಪುರ: ಕಳೆದ 10 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಾದ ಬದಲಾವಣೆ, ಸಾಧನೆ, ಆರ್ಥಿಕ ಸುಧಾರಣೆ, ಜಾಗತಿಕ ಮನ್ನಣೆ, ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದು ಇಂದು ಮತ್ತೊಮ್ಮೆ ದೇಶಕ್ಕೆ‌ ಮೋದಿ ಆಡಳಿತ ಬರಬೇಕೆಂಬುದು ಇಡಿ ದೇಶದ ಬಯಕೆಯಾಗಿದೆ.  ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದ ಮಹಾನಗರ ಪಾಲಿಕೆಯ ಐದು ವಾರ್ಡ್ ಗಳ ವ್ಯಾಪ್ತಿಯ ಪಂಡಿತ ದೀನ್ ದಯಾಳ ಉಪಾಧ್ಯಾಯ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ಸಿಗರಿಗೆ ಮೋದಿ‌ ಸರಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ.  ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಭ್ರಷ್ಟಾಚಾರ ರಹಿತ‌ ಆಡಳಿತ, ಅಭಿವೃದ್ಧಿ ಪರ್ವ ಕಾಂಗ್ರೆಸ್ಸಿಗರ ಬಾಯಿ ಕಟ್ಟಿ ಹಾಕಿದೆ. ದೇಶದಲ್ಲಿ ಮೊದಲು‌ 400 ವಿಶ್ವವಿದ್ಯಾಲಯಗಳಿದ್ದವು.  ಆದರೆ, ಕಳೆದ 10 ವರ್ಷಗಳಲ್ಲಿ 1100 ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ.  41 ವಂದೇ ಭಾರತ್ ರೈಲುಗಳು ಪ್ರಾರಂಭವಾಗಿವೆ.  ಮೆಡಿಕಲ್‌ ಕಾಲೇಜುಗಳ ಸಂಖ್ಯೆ 384 ರಿಂದ 700 ತಲುಪಿವೆ.  ದೇಶದಲ್ಲಿ 74 ಇದ್ದ ವಿಮಾನ ನಿಲ್ದಾಣಗಳು ಇಂದು ವಿಜಯಪುರ ಸೇರಿ 154 ವಿಮಾನ ನಿಲ್ದಾಣಗಳಿಗೆ ಹೆಚ್ಚಾಗಿವೆ.  ಕೇವಲ 5 ನಗರಗಳಲ್ಲಿದ್ದ ಮೆಟ್ರೋ ಇಂದು 20 ನಗರಗಳಿಗೆ ವಿಸ್ತರಣೆಯಾಗಿದೆ.  ಯುಪಿಎ ಅವಧಿಯಲ್ಲಿ 96 ಸಾವಿರ ಕಿ.ಮೀ‌ ಇದ್ದ ರಾಷ್ಟ್ರೀಯ ಹೆದ್ದಾರಿ ಇಂದು 1.50 ಲಕ್ಷ‌ ಕಿ.ಮೀ ಗೆ ಹೆಚ್ಚಳವಾಗಿದೆ.  3.75 ಲಕ್ಷ ಕಿ.ಮೀ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಿವೆ.  ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಅವರು ಹೇಳಿದರು.

ನಮ್ಮ ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ಒಡಕ್ಕಿಲ್ಲ.  ದೇಶದ ರಕ್ಷಣೆ, ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಚುನಾವಣೆ ಮಾಡುತ್ತಿದ್ದೇವೆ.  ಜಿಲ್ಲೆಯ ಮತದಾರರು ಪ್ರಬುದ್ಧರಾಗಿದ್ದಾರೆ.  ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಿಜೆಪಿಗೆ 25 ಸಾವಿರ ಲೀಡ್ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.  ದೇಶದ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲಾ‌ ಮತದಾರರು ಮೇ 7 ರಂದು ನಡೆಯುವ ಮತದಾನದಲ್ಲಿ ತಪ್ಪದೇ ಪಾಲ್ಗೊಂಡು ಬಿಜೆಪಿಗೆ ಮತ ಹಾಕಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.

ಸಂಸದ‌ ಮತ್ತು ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಕಳೆದ 65 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶದ ಏಲ್ಗೆಗೆ ಏನನ್ನು ಮಾಡದೇ ಕೇವಲ ತಮ್ಮ ಪಕ್ಷ ಹಾಗೂ ತಮ್ಮ ಮನೆ ತುಂಬಿಸಿಕೊಳ್ಳುವ ಕೆಲಸ ಮಾಡಿದ್ದರು‌.  ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಇಡಿ ವಿಶ್ವವೇ ಮೆಚ್ಚಿಕೊಂಡಿದೆ.  ಜಗತ್ತಿನ ಐದು ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಅಭಿವೃದ್ಧಿ ಹೊಂದಿದೆ.  ಬಿಜೆಪಿ‌ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ 1 ಲಕ್ಷ ಕೋಟಿಯಷ್ಟು ಅನುದಾನ ತಂದಿದ್ದೇನೆ.  ಜಿಲ್ಲೆಯ ಈ ಹಿಂದಿನ ಯಾವ ಕಾಂಗ್ರೆಸ್ ಸಂಸದರು ಮಾಡಲಾರದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.  ಆದರೆ, ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಎಲ್ಲಿಯೂ ಪ್ರಚಾರ ತೆಗೆದುಕೊಳ್ಳದೇ ಜನರ ಕಣ್ಣಲ್ಲಿ ಇರಬಾರದು.  ಜನರ ಮನಸ್ಸಿನಲ್ಲಿರಬೇಕು ಎನ್ನುವಂತೆ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗಲೂ ಹೋರಾಟ ಮಾಡಿ ಸುಮಾರು ರೂ. 42 ಸಾವಿರ ಕೋ. ವೆಚ್ಚದ ಕೂಡಗಿ ಎನ್.ಟಿ.ಪಿ.ಸಿ ಸ್ಥಾಪನೆ, ತೀವ್ರ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಇಂಡಿ‌ ಭಾಗದ ಸುಮಾರು‌76 ಹಳ್ಳಿಗಳಿಗೆ ರೂ. 120 ಕೋ. ಅನುದಾನದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ತಂದಿದ್ದೇನೆ.  ನಮ್ಮ‌ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ಚೆ ವ್ಯವಸ್ಥೆ ಅಭಿವೃದ್ಧಿ, ವಿಮಾನ ನಿಲ್ದಾಣ ಹೀಗೆ ಹತ್ತು ಹಲವು ಜನಪರ ಕೆಲಸಗಳಾಗಿವೆ.  ಇದು ನನ್ನ ಕಡೆಯ ಚುನಾವಣೆ.  ಈ ಹಿಂದೆ ಮೋದಿಯವರು ಎರಡು ಬಾರಿ ಪ್ರಧಾನಿಯಾಗಲು ಜಿಲ್ಲೆಯ ಜನ ನನಗೆ ಕೈ ಎತ್ತಲು ಅವಕಾಶ ಮಾಡಿಕೊಟ್ಟಂತೆ ಮೋದಿಯವರಿಗಾಗಿ 3 ನೇ ಬಾರಿ ಕೈ ಎತ್ತಲು ನನಗೆ ಅವಕಾಶ ಆಶೀರ್ವಾದ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.  ಇದು ನನ್ನ ಜೀವನದ ಕೊನೆಯಾಸೆ ಎಂದು ಭಾವುಕರಾಗಿ ಹೇಳಿದರು.

ಈ ವೇಳೆ ಬಿಜೆಪಿ ಮುಖಂಡರಾದ ವಿವೇಕಾನಂದ ಡಬ್ಬಿ, ಮಹಾನಗರಪಾಲಿಕೆ‌‌ ಸದಸ್ಯ ಮತ್ತು ಬಿಜೆಪಿ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ನಗರ ಮಂಡಲ‌ ಅಧ್ಯಕ್ಷ ಶಂಕರ ಹೂಗಾರ, ಸುರೇಶ ಬಿರಾದಾರ, ಬಸವರಾಜ್ ಬೈಚಬಾಳ, ಮಹಾನಗರಪಾಲಿಕೆ ಸದಸ್ಯರಾದ ಎಂ. ಎಸ್. ಕರಡಿ, ಪ್ರೇಮಾನಂದ ಬಿರಾದಾರ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮಿ ಕನ್ನೊಳ್ಳಿ, ರಾಹುಲ ಔರಂಗಬಾದ, ಮುಖಂಡರಾದ ಮಹೇಶ ಒಡೆಯರ, ಸುನಿಲ ಜೈನಾಪುರ, ಪ್ರಭು ಕೆಂಗಾರ, ಪ್ರವೀಣ ಕೂಡಗಿ, ಪಾಪುಸಿಂಗ್ ರಜಪೂತ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌