ಮೀಸಲಾತಿ ಮೂಲಕ ಸಮುದಾಯದ ಹಿತ ಕಾಪಾಡುತ್ತಿರುವ ಕಾಂಗ್ರೆಸ್ ಬೆಂಬಲಿಸೋಣ- ಬಂಜಾರಾ ನಾಯಕರ ಮನವಿ

ವಿಜಯಪುರ: ಮೀಸಲಾತಿ ನೀಡುವ ಮೂಲಕ ಸಮುದಾಯ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಸ್ವಾವಲಂಬನೆಯಾಗಲು ಕಾರಣವಾದ ಕಾಂಗ್ರೆಸ್ ನ್ನು ಬೆಂಬಲಿಸೋಣ ಎಂದು ಬಂಜಾರಾ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

ನಗರದಲ್ಲಿ ನಡೆದ ವಿಜಯಪುರ ಜಿಲ್ಲಾ ಬಂಜಾರಾ ಸ್ವಾಭಿಮಾನಿ ಸಮಾವೇಶಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದರು.

ಈ ಸಮಾವೇಶದಲ್ಲಿ ಮಾತನಾಡಿದ ವಿಧಾನ ಪರಿಷತ ಶಾಸಕ ಪ್ರಕಾಶ ರಾಠೋಡ, ಕಾಂಗ್ರೆಸ್ ನಮಗೆ ಎಸ್ಸಿಮೀಸಲಾತಿ  ನೀಡಿದ್ದರಿಂದ ನಾವು ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ.  ಬಿಜೆಪಿಯವರು ವಿಶೇಷವಾಗಿ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಅವರು ಸದಾಶಿವ ಆಯೋಗದ ಹೆಸರಿನಲ್ಲಿ ಬಂಜಾರಾ ಸಮಾಜದ ಮೀಸಲಾತಿಯನ್ನು ಕಸಿಯಲು ಹೊರಟಿದ್ದರು.  ನಮ್ಮ ಸಮುದಾಯವನ್ನು ಅತ್ಯಂತ ಕೀಳಾಗಿ ಕಂಡಿರುವ ಇವರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಿ ಸ್ವಾಭಿಮಾನ ತೋರಿಸೋಣ ಎಂದು ಹೇಳಿದರು.

ಇದು ಸ್ವಾಭಿಮಾನದ ಚುನಾವಣೆ. ನಮ್ಮ ಸಮುದಾಯದ ಮತ ಬೇಡ ಎಂದು ಹೇಳಿರುವ ಸಂಸದ ರಮೇಶ ಜಿಗಜಿಣಗಿಗೆ ಯಾಕೆ ಮತ ಹಾಕಬೇಕು? ಮುಖ್ಯಮಂತ್ರಿ ಸಿದ್ಧರಾಮಯ್ಯ ತಾಂಡಾಗಳುನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ನಮ್ಮ ಸಮುದಾಯಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ನಮ್ಮ ಬಂಜಾರಾ ಸಮುದಾಯಕ್ಕೆ ಆಗಿರುವ ನೋವು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರು ಎಂದಿಗೂ ಕಾಂಗ್ರೆಸ್ಸನ್ನು ಮರೆಯಬಾರದು. ನನ್ನ ಸಮುಮದಾಯದವರು ನನಗೆ ನೀಡಿದಷ್ಟೇ ಪ್ರೀತಿ, ಗೌರವವನ್ನು ಪ್ರೊ. ರಾಜು ಆಲಗೂರ ಅವರಿಗೆ ತೋರಿದರೆ ಸಮಾಜದ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಎಲ್ಲರೂ ಪ್ರೊ. ರಾಜು ಆಲಗೂರ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ ಗೆಲ್ಲಿಸೋಣ ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಬಂಜಾರಾ ಸಮುದಾಯ ಸ್ವಾಭಿಮಾನಿಯಾಗಿದೆ. ಕಲೆಯಲ್ಲಿ ವಿಜೃಂಭಣೆ, ಸಂಸ್ಕೃತಿಯಲ್ಲಿ ಶ್ರೀಮಂತ ನಮ್ಮ ಸಮುದಾಯದ ಪ್ರಮುಖರನ್ನು ಗುರುತಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಸಿದ್ಧರಾಮಯಯ್ ಅವರು ನಿಡೋಣಿಗೆ ಬಂದಾಗ ಸಚಿವ ಎಂ. ಬಿ. ಪಾಟೀಲ ಅವರು ಸೇವಾಲಾಲ ಜಯಂತಿಯನ್ನು ಸರಕಾರದ ವತಿಯಿಂದ ಮಾಡುವಂತೆ ಮನವಿ ಮಾಡಿದ್ದರು. ಆಗ ಕೂಡಲೇ ಸ್ಪಂದಿಸಿದ ಸಿಎಂ ಈ ಕುರಿತು ಆದೇಶ ಹೊರಡಿಸಿದ್ದರು. ಅಲ್ಲದೇ, ನಮ್ಮ ಬಬಲೇಶ್ವರ ಮತಕ್ಷೇತ್ರದ ತಾಂಡಾಗಳಲ್ಲಿನ ಅಭಿವೃದ್ಧಿಯನ್ನು ಕಂಡು ರಾಜ್ಯದಲ್ಲಿ ತಾಂಡಾಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿದರು. ಈಗ ನಾನು ನಿಗಮದ ಅಧ್ಯಕ್ಷೆಯಾಗಿದ್ದೇನೆ. ನಮ್ಮ ಸಮಾಜದ ಭೀಮಾ ನಾಯಕ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ರಾಮಪ್ಪ ಲಮಾಣಿ ವಿಧಾನ ಸಭೆ ಉಪಾಧ್ಯಕ್ಷರಾಗಿದ್ದಾರೆ. ಬಂಜಾರಾ ಅಭಿವೃದ್ಧಿ ನಿಗಮ ಅಧ್ಯಕ್ಷರ ನೇಮಕ ಬಾಕಿ ಇದ್ದು, ಅಲ್ಲಿಯೂ ಬಂಜಾರಾ ಸಮುದಾಯದ ವ್ಯಕ್ತಿಯೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಡಾ. ಬಾಬುರಾಜೇಂದ್ರ ನಾಯಕ ಮಾತನಾಡಿ, ನನ್ನ್ನನು ದುಡಿಸಿಕೊಂಡು ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ಕೈಕೊಟ್ಟರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿಯಿಂದ ನಮ್ಮ ಸಮುಮದಾಯಕ್ಕೆ ಟಿಕೆಟ್ ನೀಡಬಹುದಿತ್ತು. ಆದರೆ, ಗೆಲ್ಲುವ ಅವಕಾಶವಿದ್ದ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡದೆ ಟಿಕೇಟನ್ನೇ ಕೇಳದ ತಮ್ಮ ಸಮುದಾಯದ ಸಂಜೀವ ಐಹೊಳಿ ಅವರಿಗೆ ಟಿಕೆಟ್ ನೀಡಿದರು. ಈಗ ಕಾಂಗ್ರೆಸ್- ಬಿಜೆಪಿ ಮಧ್ಯೆ ಚುನಾವಣೆ ನಡೆಯುತ್ತಿಲ್ಲ. ಬಿಜೆಪಿ ಮತ್ತು ಬಂಜಾರಾ ಮಧ್ಯೆ ನಡೆಯುತ್ತಿದೆ. ನನ್ನ ಪರವಾಗಿ ಬೆಂಬಲಿಗರು ಟಿಕೆಟ್ ಕೇಳಿದಾಗ ಬಂಜಾರಾ ಮತಗಳು ನನಗೆ ಬೇಡ ಎಂದು ಸಂಸದ ರಮೇಶ ಜಿಗಜಿಣಗಿ ನಮ್ಮ ಸ್ವಾಭಿಮಾನ ಕೆಣಕಿದ್ದಾರೆ. ಹೀಗಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರಿದ್ದೇನೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

ಬಿಜೆಪಿಯ ಗೋವಿಂದ ಕಾರಜೋಳ ಮತ್ತು ರಮೇಶ ಜಿಗಜಿಣಗಿ ಓಳಮೀಸಲಾತಿ ಮೂಲಕ ನಮಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಲು ಹೊರಟಿದ್ದಾರೆ. ನಮ್ಮ ಹಕ್ಕು ಪಡೆಯಲು, ನಮ್ಮ ಮಾನ, ಸಮ್ಮಾನಕ್ಕಾಗಿ ಕಾಂಗ್ರೆಸ್ಸಿಗೆ ಮತ ಹಾಕೋಣ. ನಮ್ಮ ಜಾತಿಗೆ ಅವಮಾನ ಮಾಡಿದವರಿಗೆ ಮತದ ಮೂಲಕ ತಕ್ಕಪಾಠ ಕಲಿಸೋಣ. ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸೋಣ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಬಂಜಾರಾ ಸಮಾಜ ನಾವೆಲ್ಲ ಪರಿಶಿಷ್ಠ ಜಾತಿಯಲ್ಲಿ ಸೇರಲು ಅಂಬೇಡ್ಕರ ರಚಿತ ಸಂವಿಧಾನ, ಕಾಂಗ್ರೆಸ್ ಕಾರಣ. ಕರ್ನಾಟಕದಲ್ಲಿ 5000 ತಾಂಡಾಗಳಿವೆ. ವಿಜಯಪುರ ಜಿಲ್ಲೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಲಂಬಾಣಿ ತಾಂಡಾಗಳಿವೆ. ಈ ಮುಂಚೆ ನಾವೆಲ್ಲರೂ ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದೇವು. ಆದರೆ, ಸಿಎಂ ಸಿದ್ಧರಾಮಯ್ಯ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ನೀರಾವರಿ ಯೋಜನೆಗಳಿಂದಾಗಿ ಗುಳೆ ಹೋಗುವುದು ತಪ್ಪಿ ನಮ್ಮ ಹೊಲಗಳಲ್ಲಿ ಕೃಷಿ, ತೋಟಗಾರಿ, ವ್ಯಾಪಾರ, ವಹಿವಾಟು ತೊಡಗಿ ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮೆಲ್ಲರ ಆರಾಧ್ಯ ದೈವ ಹಾಮುಲಾಲರ ದೇವಸ್ಥಾನ, ಆದರ್ಶ ನಗರದಲ್ಲಿ ಸೇವಾಲಾಲ ಮತ್ತು ದುರ್ಗಾದೇವಿ ಮಂದಿರ ನಿರ್ಮಿಸಿ ಆರಾಧನೆಗೆ ಅವಕಾಶ ಕಲ್ಪಿಸಿದ್ದಾರೆ. ಸಮುದಾಯ ಭವನಕ್ಕೆ ರಾಮೆರಾಜ ಮಹಾರಾಜರ ಹೆಸರು ನಾಮಕರಣ ಮಾಡಿದ್ದಾರೆ. ಕರ್ನಾಟಕದಲ್ಲಿ ಹಾಮುಲಾಲ, ಸೇವಾಲಾಲ್ ಮಹಾರಾಜರ ಹೆಸರಿನಲ್ಲಿ ದೇವಸ್ಥಾನಗಳಿಗೆ ದೇಶದಲ್ಲಿಯೇ ಅತೀ ಹೆಚ್ಚು ಅನುದಾನ ನೀಡಲಾಗಿದೆ. ಹೀಗಾಗಿ ನಾವೆಲ್ಲರೂ ಸದಾ ಕಾಂಗ್ರೆಸ್ಸಿನೊಂದಿಗಿದ್ದು, ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸೋಣ ಎಂದು ಹೇಳಿದರು.

ಮತ್ತೋರ್ವ ಮುಖಂಡ ಬಿ. ಬಿ. ಲಮಾಣಿ ಮಾತನಾಡಿ, ಮೋದಿ.. ಮೋದಿ. ಮೋದಿ… ಎಂದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ಮತ್ತು ನಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವವರನ್ನು ನಾವು ಬೆಂಬಲಿಸೋಣ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸೋಣ ಎಂದು ಹೇಳಿದರು.

ಬಂಜಾರಾ ಸಮುದಾಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಅವರು, ಬಂಜಾರಾ ಸಮಾಜ ಮತ್ತು ಕಾಂಗ್ರೆಸ್ ಮಧ್ಯೆ ಅನೋನ್ಯ ಬಾಂಧವ್ಯವಿದೆ. ಶ್ರಮಜೀವಿಗಳಾದ ಈ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಿ ಶಿಕ್ಷಣ ಉದ್ಯೊಗದಲ್ಲಿ ಮೀಸಲಾತಿ ನೀಡಲಾಗಿದೆ. ಇದಕ್ಕೆ ಇಂದಿರಾ ಗಾಂಧಿ, ದೇವರಾಜ ಅರಸ, ಕೆ. ಟಿ. ರಾಠೋಡ, ಎಲ್. ಆರ್. ನಾಯಕ ಕಾರಣ. ಕಾಂಗ್ರೆಸ್ ಸದಾ ಬಂಜಾರಾ ಪರವಾಗಿರಲಿದೆ. ಬಂಜಾರಾ ಸಮುದಾಯ ಶ್ರಮಜೀವಿಗಳು. ಬಸವಣ್ಣನವರ ಕಾಯಕ ತತ್ವದಡಿ ನಡೆಯುತ್ತಿದ್ದಾರೆ. ಸಮುದಾಯದವರು ಸಂಸ್ಕೃತಿ ಉಳಿಸಿಕೊಂಡು ಮುಂದುವರೆದಿದ್ದಾರೆ. ದೇವರ ಮೇಲೆ ಶ್ರದ್ಧೆ, ಭಕ್ತಿ ಹೊಂದಿದ್ದು, ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಪ್ರತಿವರ್ಷ ಜಾತ್ರೆ ನಡೆಸಿ ದೇವಭಕ್ತಿ ತೊರುತ್ತಾರೆ. ಸಂಸದ ರಮೇಶ ಜಿಗಜಿಣಗಿ ಬಂಜಾರಾ ಮತ ಬೇಡ ಎನ್ನುತ್ತಾರೆ. ಇದನ್ನು ಎಲ್ಲರೂ ಅರ್ಥೈಸಿಕೊಂಡು ತಮ್ಮ ಹಕ್ಕು ಚಲಾಯಿಸಬೇಕು. ಇಂದಿರಾ ಗಾಂಧಿ, ಕಾಂಗ್ರೆಸ್ ಕೊಡುಗೆ ಗಮನದಲ್ಲಿಟ್ಟುಕೊಂಡು ಸ್ವಾಭಿಮಾನಿ ಬಂಜಾರಾ ಸಮುದಾಯದ ಮತದಾರರು ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಬೇಕು. ನಿಮ್ಮ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಸ್ವಾಭಿಮಾನ ಸಮಾವೇಶದ ಮೂಲಕ ಬೆಂಬಲಿಸಿದ ಎಲ್ಲರಿಗೂ ಹೃದಯಪೂರಕ ನಮನಗಳನ್ನು ಸಲ್ಲಿಸುತ್ತೇನೆ. ಬಂಜಾರಾ ಸಮಾಜದ ನೋವಿನ ಕುರಿತು ನನಗೆ ಅರಿವಿದೆ. ನಾನು ಸದಾ ಬಂಜಾರಾ ಸಮಾಜದ ಜೊತೆ ಸದಾ ಇರುತ್ತೇನೆ. ಕಷ್ಟದ ಕಾಲದಲ್ಲಿ ಸಹಾಯ ಮಾಡುವವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನನಗೆ ಮತ ಹಾಕಿ ಆಯ್ಕೆ ಮಾಡಿ. ಬಂಜಾರಾ ಸಮಾಜಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಂಜಾರಾ ಸಮುದಾಯದ ಮುಖಂಡರಾದ ಡಿ. ಎಲ್. ಚವ್ಹಾಣ, ವಾಮನ ಚವ್ಹಾಣ, ರಾಜು ಜಾಧವ, ಮಲ್ಲಿಕಾರ್ಜುನ ನಾಯಕ, ಶಂಕರ ಚವ್ಹಾಣ, ಎಂ. ಎಸ್. ನಾಯಕ, ಬಿ. ಬಿ. ಲಮಾಣಿ, ಸುರೇಶ ರಾಠೋಡ, ಶೇಖರ ನಾಯಕ, ರವಿ ಜಾಧವ, ರಾಜು ಚವ್ಹಾಣ, ಮಾಜಿ ಶಾಸಕ ಶರಣಪ್ಪ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌