ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿ: ವ್ಯವಸ್ಥಿತ ಮತ ಎಣಿಕೆಗೆ ಜಿಲ್ಲಾಧಿಕಾರಿ ಸೂಚನೆ

ವಿಜಯಪುರ: ಮತ ಎಣಿಕೆಗೆ ನಿಗಧಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮಗಳನ್ನು ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.  

ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ – 2024ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಅವರು ಸಲಹೆ ಸೂಚನೆ ನೀಡಿದರು.

ಮತ ಎಣಿಕೆ ಪ್ರಕ್ರಿಯೆ ಜೂ. 4ರಂದು ವಿಜಯಪುರ ಸೈನಿಕ ಶಾಲೆಯಲ್ಲಿ ನಡೆಯಲಿದೆ.  ಅಂದು ಬೆ. 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳು ಆಗದಂತೆ ನೋಡಿಕೊಳ್ಳಬೇಕು.  ಅಂದು ಬೆ. 7 ಗಂಟೆಯ ಒಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಹಾಲ್‌ನಲ್ಲಿ ಹಾಜರಿರಬೇಕು.  ಮತ ಎಣಿಕೆ ಹಾಲ್ ಒಳಗಡೆ ಮೊಬೈಲ್ ನ್ನು ನಿಷೇಧಿಸಲಾಗಿದೆ.  ಮತ ಎಣಿಕೆ ಹಾಲ್ ಒಳಗಡೆ ಪೊಲೀಸ್, ಸೆಕ್ಯೂರಿಟಿ ಸಿಬ್ಬಂದಿಗಳಿಗೆ ಅನಾವಶ್ಯಕವಾಗಿ ಪ್ರವೇಶವಿರುವುದಿಲ್ಲ.  ಅಭ್ಯರ್ಥಿಗಳಲ್ಲದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಮತ ಎಣಿಕೆ ಕೊಠಡಿಯೊಳಗೆ ಪ್ರವೇಶ ಇರುವುದಿಲ್ಲ.  ಈ ಕುರಿತು ಮಾಹಿತಿ ಮಾಹಿತಿ ತಿಳಿದಿರಲಿ ಎಂದು ಅವರು ಹೇಳಿದರು.

ವಿಜಯಪುರ ನಗರದಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆ ಕುರಿತು ಮಾಸ್ಟರ್ ಟ್ರೇನರ್ ಅಶೋಕ ಲಿಮಕರ ಅವರು ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಿದರು.

ಮತ ಎಣಿಕೆ ಪ್ರಾರಂಬವಾಗುವ ಮೊದಲು ವಿವಿಪ್ಯಾಟ್ ಆನ್ ಮಾಡಬೇಕು.  ನಂತರ ರಿಸಲ್ಟ್ ಬಟನ್ ಪ್ರೆಸ್ ಮಾಡಬೇಕು.  ಅದನ್ನು ಕ್ಲೋಸ್ ಮಾಡುವಾಗ ಬಹಳ ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು.  ಮತ ಎಣಿಕೆಗೆ ನಿಯೋಜನೆಯಾಗಿರುವ ಏಜೆಂಟ್‌ರ ಬಳಿ ಶಾಂತವಾಗಿ ವರ್ತಿಸಬೇಕು.  ಅವರಿಗೆ ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಪರಿಹರಿಸಬೇಕು.  ಪ್ರತಿ ಇವಿಎಂ ಗಳಲ್ಲಿ ಮತ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು.  ಇಂದಿನ ತರಬೇತಿ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಿ.  ಏಕೆಂದರೆ ಮತ ಎಣಿಕೆ ಮೇಲ್ವೀಚಾರಕರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ಡಿಸಿ ಹೇಳಿದರು.

ಮಾಸ್ಟರ್ ಟ್ರೇನರ್ ಅಶೋಕ ಲಿಮಕರ ಅವರು ತರಬೇತಿಗೆ ಆಗಮಿಸಿದ ಸಿಬ್ಬಂದಿಗಳಿಗೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನುಸರಿಸಬಹುದಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಅವರು ತರಬೇತಿಗೆ ಆಗಮಿಸಿದ ಸಿಬ್ಬಂದಿಗೆ ಮತ ಎಣಿಕೆಯ ಪ್ರಕ್ರಿಯೆಗಳ ಕುರಿತು ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಗಳ ಕಾರ್ಯವೈಖರಿ, ಅದನ್ನು ಬಳಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಸ್ವತಃ ವಿವಿಪ್ಯಾಟ್‌ನ ಮಾದರಿ ಮತ ಎಣಿಕೆ ಪ್ರಾತ್ಯಕ್ಷಿಕೆ ಪರೀಕ್ಷೆ ಮಾಡಿದ ಜಿಲ್ಲಾಧಿಕಾರಿ

ಲೋಕಸಭೆ ಚುನಾವಣೆ ಮತಎಣಿಕೆ ಪೂರ್ವಸಿದ್ಧತೆ ತರಬೇತಿಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸ್ವತಃ ಮಾದರಿ ವಿವಿಪ್ಯಾಟ್ ನ್ನು ವಿಕ್ಷೀಸಿ ಮತ ಎಣಿಕೆಯ ವಿಧಾನ ಮತ್ತು ಹಂತಗಳನ್ನು ಪರಿಶೀಲನೆ ನಡೆಸಿದರು.

Leave a Reply

ಹೊಸ ಪೋಸ್ಟ್‌