ಕನಿಷ್ಠ ಒಂದು ಮತದಿಂದಾದರೂ ಗೆಲ್ಲುವೆ- ಚುನಾವಣೆ ಬಳಿಕ ರಾಜ್ಯ ಸರಕಾರ ತಂತಾನೆ ಪತನವಾಗಲಿದೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕನಿಷ್ಠ ಒಂದು ಮತದ ಅಂತರದಿಂದಾದರೂ ಗೆಲ್ಲುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಪುನರುಚ್ಚರಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ವಿಜಯಪುರದಲ್ಲಿ ಒನ್ ಸೈಡೆಡ್ ಚುನಾವಣೆ ನಡೆದಿದೆ ಎಂದು ತಿಳಿಸಿದರು.

ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಸಂಪೂರ್ಣ ವಿಶ್ವಾಸವಿದೆ.  ನನ್ನ ಜೀವನದಲ್ಲಿ ಇದು ಹೊಸ ಅನುಭವ.  ನಾನೇನು ಮೇಲಿನಿಂದ ಬಂದವನಲ್ಲ.  ನಾನು ಏಕಾಏಕೆ ಬಂದು ಎಂಎಲ್ಎ, ಮಂತ್ರಿಯಾದವನಲ್ಲ.  ಹಂತಹಂತವಾಗಿ ಪ್ರತಿಯೊಬ್ಬ ಕಾರ್ಯಕರ್ತರ ಭಾವನೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಿ ರಾಜಕಾರಣದಲ್ಲಿ ಬೆಳೆದು ಬಂದಿದ್ದೇನೆ.  ಸಮಾಜ ನನಗೆ ನೀಡಿರುವ ಅನುಭವಗಳನ್ನು ರಾಜಕಾರಣದಲ್ಲಿ ಸದ್ಬಳಕೆ ಮಾಡಿಕೊಂಡಿದ್ದೇನೆ.  ಇದರಿಂದ ನನಗೆ ಬಹಳ ಉಪಯೋಗವಾಗಿದೆ.  ಇದರಿಂದ ನನಗೆ ವೈಯಕ್ತಿಕವಾಗಿಯೂ ಒಳ್ಳೆಯದಾಗಿದೆ ಎಂದು ಅವರು ಹೇಳಿದರು.

ಈ ಬಾರಿ ನಾನು ಕನಿಷ್ಠ ಒಂದು ಮತದ ಅಂತರದಿಂದಾದರೂ ಗೆದ್ದು ಬರುತ್ತೇನೆ.  ಯಾರಿಗೂ ಈ ಬಗ್ಗೆ ಸಂಶಯ ಬೇಡ.  ನಾನು ಇಡೀ ಮತಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡಿದ್ದೇನೆ.  ಆರೋಗ್ಯವನ್ನು ಲೆಕ್ಕಿಸದೇ ತಿರುಗಾಡಿದ್ದೇನೆ.  ಅದರಲ್ಲೂ ಮಹಿಳೆಯರು ಈ ಹಿಂದೆ ರೂ. 2000 ನೀಡುವುದಾಗಿ ಹೇಳಿದ್ದಕ್ಕೆ ಸಿದ್ಧರಾಮಯ್ಯ ಅವರಿಗೆ ಮತಹಾಕಿ ಗೆಲ್ಲಿಸಿದ್ದೇವೆ.  ಈಗ ಅವರದು ಮುಗಿದಿದೆ.  ಈಗ ಲೋಕಸಭೆ ಚುನಾವಣೆಯಲ್ಲಿ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಸೇರಿದಂತೆ ನಮಗೆಲ್ಲರಿಗೂ ಅನುಕೂಲ ಮಾಡಿಕೊಟ್ಟಿರುವ ಮೋದಿ ಸಾಹೇಬರಿಗೆ ಬಿಟ್ಟು ಇನ್ಯಾರಿಗೆ ವೋಟು ಹಾಕೋಣ ಎಂದು ಹೇಳಿದ್ದಾರೆ.  ಈ ಬಾರಿ ಚುನಾವಣೆ ಬಹಳ ಚೆನ್ನಾಗಿ ಆಗಿರುವುದು ನನ್ನ ಅದೃಷ್ಟ.  ಇಷ್ಟೋಂದು ಈವರೆಗೆ ನಾನು ಎದುರಿಸಿದ 13 ಚುನಾವಣೆಗಳಲ್ಲಿಯೇ ಈ ಬಾರಿಯ ಚುನಾವಣೆ ಅತ್ಯಂತ ಒಳ್ಳೆಯ ಮತ್ತು ಸಮಾಧಾನವಾಗಿ ನಡೆದಿದೆ ಎಂದು ಸಂಸದರು ತಿಳಿಸಿದರು.

ರಾಜ್ಯ ಸರಕಾರ ತಂತಾನೆ ಪತನವಾಗಲಿದೆ

ಈ ಚುನಾವಣೆ ಬಳಿಕ ರಾಜ್ಯ ಸರಕಾರ ತಂತಾನೆ ಪತನವಾಗಲಿದೆ.  ನಾವ್ಯಾರೂ ಏನೂ ಮಾಡುವುದಿಲ್ಲ.  ಅದು ಹೇಗೆ ಬೀಳುತ್ತದೆ ಎಂದು ನಾನು ಭವಿಷ್ಯ ಹೇಳಲ್ಲ.  ಆದರೆ, ಸರಕಾರ ಮಾತ್ರ ತಂತಾನೆ ಬೀಳಲಿದೆ ಎಂದು ಅವರು ಭವಿಷ್ಯ ನುಡಿದರು.

ನಾನಾಗಿ ಸಚಿವ ಸ್ಥಾನ ಕೇಳುವುದಿಲ್ಲ

ಇದೇ ವೇಳೆ ಕೇಂದ್ರದಲ್ಲಿ ಸಚಿವರಾಗುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ವಯಸ್ಸಿಗೆ ತಕ್ಕ ಖಾತೆ ನೀಡಿದರೆ ಸಚಿವನಾಗುತ್ತೇನೆ.  ಈ ಮುಂಚೆ ನನ್ನ ಮೇಲೆ ವಿಶ್ವಾಸವಿಟ್ಟು ಕೇಂದ್ರದಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು.  ನಾನೂ ಕೂಡ ಅಷ್ಟೇ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ದೇಶದ ಜನರಿಗೆ ಕುಡಿಯುವ ನೀರು ಒದಗಿಸಲು ಪ್ರಯಾಸ ಮಾಡಿದ್ದೇನೆ.  ನಮ್ಮ ಜಿಲ್ಲೆಯಲ್ಲಿ ಆಗಿರುವ ಯೋಜನೆಗಳು ತಮಗೆಲ್ಲರಿಗೂ ಗೊತ್ತಿದೆ.  ಮುಂದೆ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡುವ ಕುರಿತು ಹೈಕಮಾಂಡ ನಿರ್ಧರಿಸುತ್ತದೆ.  ನನ್ನ ಜೀವನದಲ್ಲಿ ಯಾವತ್ತೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ.  ಒಬ್ಬ ವ್ಯಕ್ತಿಯ ಸಲುವಾಗಿ ಅಧಿಕಾರ ಬಿಟ್ಟಿದ್ದೇನೆ.  ಕಂದಾಯ ಸಚಿವ ಸ್ಥಾನವನ್ನು ಬೇರೊಬ್ಬರ ಸಲುವಾಗಿ ತ್ಯಾಗ ಮಾಡಿದ್ದೇನೆ.  ಆಯ್ಕೆಯಾದ ನಂತರ ನಾನು ಸಚಿವ ಸ್ಥಾನ ಕೊಡಿ ಎಂದು ಯಾರನ್ನೂ ಕೇಳುವುದಿಲ್ಲ.  ಅವರಾಗಿಯೇ ನೀಡಿದರೆ ಮಂತ್ರಿಯಾಗುತ್ತೇನೆ.  ನನ್ನ ವಯಸ್ಸಿಗೆ ತಕ್ಕ ಖಾತೆ ನೀಡಿದರೆ ಸಚಿವನಾಗುತ್ತೇನೆ.  ಕೇಂದ್ರ ಸಚಿವರಿಗಿಂತಲೂ ಹೆಚ್ಚಿನ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ.  ಮುಂದೆಯೂ ಮಾಡಿ ತೋರಿಸುತ್ತೇನೆ ಎಂದು ಅವರು ಹೇಳಿದರು.

ನನ್ನ ಅನುಭವ ಸದುಪಯೋಗ ಪಡಿಸಿಕೊಳ್ಳಲಿಲ್ಲ

ಇದೇ ವೇಳೆ, ನಾನು ಕಳೆದ 45 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದೇನೆ.  ಆದರೆ, ನನ್ನ ಪಕ್ಷದವರು ನನ್ನ ಅನುಭವವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡಿಲ್ಲ.  ನಾನು ಸುಮಾರು 45 ವರ್ಷ ರಾಜಕಾರಣದಲ್ಲಿ 20 ವರ್ಷ ಸಚಿವನಾಗಿದ್ದೇನೆ.  ನನ್ನಷ್ಟು ಹಿರಿಯರು ಪಕ್ಷದಲ್ಲಿ ಯಾರೂ ಇಲ್ಲ.  ನನ್ನ ಅನುಭವಗಳನ್ನು ಹಂಚಿಕೊಳ್ಳಲಿಲ್ಲ ಎಂಬ ನೋವು ನನಗಿದೆ.  ನನ್ನ ಸಲುವಾಗಿ ಅಲ್ಲ, ಪಕ್ಷದ ಸಲುವಾಗಿ ನನ್ನ ಅನುಭವ ಪಡೆಯಬೇಕಿತ್ತು.  ನಾನು ಎಲ್ಲ ತ್ಯಾಗ ಮಾಡಿದ್ದೇನೆ.  ಜೀವನದಲ್ಲಿ ಹಣದ ಹಿಂದೆ ಬಿದ್ದಿಲ್ಲ.  ಅಧಿಕಾರದ ಹಿಂದೆ ಬಿದ್ದಿಲ್ಲ.  ಇರುವುದನ್ನು ಬಿಟ್ಟಿದ್ದೇನೆ.  ನನ್ನ ವಯಸ್ಸಿಗೆ ತಕ್ಕ ಹುದ್ದೆ ನೀಡಿದರೆ ನೀಡಿ.  ಕೊಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಬಿಜೆಪಿ ಹೈಕಮಾಂಡ ತಮ್ಮ ಅನುಭವ ಗುರುತಿಸದಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರುವುದಿಲ್ಲ

ಈ ಬಾರಿ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಪ್ರಭಾವ ಬೀರಿಲ್ಲ.  ಎಲ್ಲ ಮಹಿಳೆಯರಿಗೆ ಹಣ ನೀಡುವುದಾಗಿ ಹೇಳಿ ಈಗ ಕೇವಲ ಒಬ್ಬರಿಗೆ ಮಾತ್ರ ನೀಡಿ ಮನೆಯಲ್ಲಿಯೇ ಮಹಿಳೆಯರು ಜಗಳವಾಡುವಂತೆ ಮಾಡಿದ್ದಾರೆ.  ಅತ್ತೆ-ಸೊಸೆ ಮಧ್ಯೆ ಜಗಳ ಹಚ್ಚಿದ್ದಾರೆ.  ಇವರು ಮಾತ್ರ ರೂ. 2000 ಕೊಟ್ಟಿದ್ದಾರಾ? ಮೋದಿಯವರು ಏನೂ ಕೊಟ್ಟಿಲ್ಲವೇ? ಮೋದಿ ಅವರು ಮಾಡಿದಷ್ಟು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಾಡಿದ್ದಾರಾ? ಆದರೆ, ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ.  ಜಗತ್ತಿಗೆ ಮೋದಿಯೆ ಗ್ಯಾರಂಟಿಯಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಜ್ವಲ್ ರೇವಣ್ಣ ಕೇಸ್

ಪ್ರಜ್ವಲ ರೇವಣ್ಣ ಪ್ರಕರಣದಿಂದ ಮೈತ್ರಿಗೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ.  ತನಿಖೆ ಸಂಪೂರ್ಣವಾದ ನಂತರ ಇದರ ಹಿಂದೆ ಯಾರಾರು ಇದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಲಿದೆ.  ಇದರ ಪರಿಣಾಮ ಚುನಾವಣೆ ಮೇಲೆ ಆಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಾಲ್ಮಿಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ

ವಾಲ್ಮಿಕಿ ನಿಗಮದ ಹಗರಣದಲ್ಲಿ ಬಡ ಸಮಾಜದ ಹಣ ತಿಂದಿದ್ದಾರೆ.  ಹೀಗಾಗಿ ಆ ಸಚಿವರು ರಾಜೀನಾಮೆ ಕೊಡಲೇಬೇಕು ಎಂದು ಅವರು ಆಗ್ರಹಿಸಿದರು.

ಶಾಂತಿಯುತ ಚುನಾವಣೆಗೆ ಕೃತಜ್ಞತೆ

ಈ ಬಾರಿ ಚುನಾವಣೆ ಶಾಂತಿಯುತವಾಗಿ ನಡೆದಿದೆ.  ಅಧಿಕಾರಿಗಳೂ ಸಮರ್ಪಕವಾಗಿ ಚುನಾವಣೆ ನಡೆಸಿಕೊಟ್ಟಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌