ಪೆಟ್ರೋಲ್ ಡೀಸೆಲ್ ದರ ಏರಿಕೆಗೂ ಚುನಾವಣೆ ಫಲಿತಾಂಶಕ್ಕೂ ಸಂಬಂಧವಿಲ್ಲ- ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ

ವಿಜಯಪುರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೂ ಚುನಾವಣೆ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ.   ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ. 

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಹೆಲಿಪ್ಯಾಡ್ ನಲ್ಲಿ ಮಾಧ್ಮಯ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ಸೇಡಿಗಾಗಿ ತೈಲಬೆಲೆ ಏರಿಕೆ ಮಾಡಲಾಗಿದೆ ಎಂಬ  ಹೇಳಿಕೆಗೆ ಸಿಎಂ ಪ್ರತಿಕ್ರಿಯ ನೀಡಿದರು.

ವಿಜಯಪುರದಲ್ಲಿ ನಾವು ಸೋತಿದ್ದೇವೆ.  ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ.  ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು.  ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಒಂಭತ್ತು ಸ್ಥಾನಗಳನ್ನು ಗಳಿಸಿದ್ದೇವೆ.  ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿತ್ತು.  ಆದರೆ, ಈ ಬಾರಿ ಅದು 19 ಕ್ಕೆ ಇಳಿದಿದೆ.  ನಮಗೆ ಶೇ. 13 ಮತ ಹಂಚಿಕೆಯಾಗಿದೆ.  ನಾವು ಸೋತಿದ್ದೇವೆಯೇ ಎಂದು ಪ್ರಶ್ನಿಸಿದ ಅವರು, ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ ಎಂದು ಅವರು ಹೇಳಿದರು.

ಬಿಜೆಪಿ ಸೋತಿದೆ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದೆ.  ಕಳೆದ ಬಾರಿ 303 ಸ್ಥಾನಗಳನ್ನು ಪಡೆದಿದ್ದ ಆ ಪಕ್ಷ ಈ ಬಾರಿ 240 ಸ್ಥಾನಗಳನ್ನು ಪಡೆದು ಸೋತಿದೆ.  ಕಳೆದ ಬಾರಿ ಶೇ. 31 ಮತ್ತು ಈ ಬಾರಿ ಶೇ. 41 ಮತ ಹಂಚಿಕೆಯಾಗಿದೆ.  ರಾಜ್ಯದಲ್ಲಿ ನಮಗೆ 15 ಸ್ಥಾನ ಬರಬಹುದು ಎಂಬ ನಿರೀಕ್ಷೆಯಿತ್ತು.  ನಾವು ಸೋತಿದ್ದೇವೆಯೆ? ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತ ಬಂದಿದೆ.  ಈಗ ಮೋದಿ ಅಲೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ

ಪೆಟ್ರೋಲ್ ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 11.4.2021ರಂದು ಪೆಟ್ರೋಲ್ ಮೇಲೆ ಶೇ. 35 ರಷ್ಟು ತೆರಿಗೆ ಮತ್ತು ಡೀಸೆಲ್ ಮೇಲೆ ಶೇ. 24 ತೆರಿಗೆ ಹಾಕುತ್ತಿದ್ದರು.  ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ ಕೂಡ ತರಿಗೆಯನ್ನು ಶೇ. 35 ರಿಂದ ಶೇ. 25.92 ಕ್ಕೆ ಇಳಿಸಿದರು.  ಡೀಸಲ್ ಮೇಲಿನ ತೆರಿಗೆಯನ್ನು ಶೇ. 14.34ಕ್ಕೆ ಇಳಿಸಿದರು.  ರೂ. 7 ರಷ್ಟು ದರ ಕಡಿಮೆ ಮಾಡಿದರು.  ಏಕೆಂದರೆ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಕಡಿಮೆ ಮಾಡಲಿಲ್ಲ.  ಈಗ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 99.85 ಇದೆ.  ನಿನ್ನೆಯಿಂದ ರೂ. 3 ಹೆಚ್ಚು ಮಾಡಿದ್ದೇವೆ.  ಇದರಿಂದಾಗಿ ಈಗ ರೂ. 102ಕ್ಕೆ ಏರಿಕೆಯಾಗಿದೆ.  ಇದು ತಮಿಳುನಾಡಿಗೆ ಸಮವಾಗಿದೆ.  ಕೇರಳದ ಕಾಸರಗೋಡಿನಲ್ಲಿ ರೂ. 106.66, ಆಂಧ್ರ ಪ್ರದೇಶದ ಅನಂತಪುರದಲ್ಲಿ ರೂ. 109.44, ತೆಲಂಗಾಣದ ಹೈದರಾಬಾದಿನಲ್ಲಿ ರೂ. 107.40 ಹಾಗೂ ಮಹಾರಾಷ್ಟ್ರದಲ್ಲಿ ರೂ. 104.46 ಇದೆ.  ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ  ಕಡಿಮೆ ಇದೆ ಎಂದು ಅವರು ಹೇಳಿದರು.

ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಇಷ್ಟು ದುಬಾರಿಯಾಗಿರಲಿಲ್ಲ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗ ತೆರಿಗೆ ಪ್ರಮಾಣ ಶೇ. 35 ರಷ್ಟು ಇತ್ತು.  ಬಿಜೆಪಿ ಸರಕಾರ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ರೂ. 104.86 ಇದೆ.  ಮಧ್ಯ ಪ್ರದೇಶದಲ್ಲಿ ರೂ. 106.47 ಇದೆ.  ಕರ್ನಾಟದಲ್ಲಿ ಈ ರಾಜ್ಯಗಳಿಗಿಂತ ಕಡಿಮೆ ಇದೆ.  ಪಕ್ಕದ ರಾಜ್ಯಗಳಿಗೆ ಸಮವಾಗಿರಲಿ ಎಂಬ ಕಾರಣಕ್ಕೆ ಬೆಲೆ ಏರಿಕೆ ಮಾಡಿರಲಿಲ್ಲ.  ಚುನಾವಣೆಯ ನಂತರ ತೆರಿಗೆ ಹೆಚ್ಚಿಸಲು ಏರಿಕೆ ಮಾಡಿದ್ದೇವೆ. ಇತರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅನುದಾನ ನೀಡಲಾಗಿದೆ

ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಅನುದಾನ ನೀಡಲಾಗಿದೆ.  ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಿದೆ.  ಚುನಾವಣೆಗಾಗಿ ಅಲ್ಲ.  ಸಾರ್ವಜನಿಕರಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಗಾಳಿಸುದ್ದಿ ಎದ್ದಿರುವ ಬಗ್ಗೆ ಮಾತನಾಡಿ ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಿದೆ ಚುನಾವಣೆಗಾಗಿ ಅಲ್ಲ ಎಂದು ಎಸ್. ಸಿದ್ಧರಾಮಯ್ಯ ಹೇಳಿದರು.

Leave a Reply

ಹೊಸ ಪೋಸ್ಟ್‌