ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು- ಜ್ಞಾನದಿಂದ ಜೀವನದಲ್ಲಿ ಸಾಧನೆ ಸಾಧ್ಯ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಸಾಹಿತ್ಯದ ಬಗ್ಗೆ ಎಲ್ಲರೂ ಅಭಿರುಚಿ ಬೆಳೆಸಿಕೊಳ್ಳಬೇಕು.  ಜ್ಞಾನದಿಂದ ಜೀವನದಲ್ಲಿ ಅನೇಕ ಸಾಧನೆ ಮಾಡಬಹುದು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಾಹಿತಿ ಶ್ರೀ ಎನ್. ಆರ್. ಕುಲಕರ್ಣಿ ಅವರ ಬಕುಲ ಪುಷ್ಪ ಅಭಿನಂದನೆ ಗ್ರಂಥ ಬಿಡುಗಡೆ ಮತ್ತು ಗ್ರಂಥ ತುಲಾಭಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪತ್ತಿನಿಂದ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ.  ಆದರೆ, ಜ್ಞಾನ ಸಂಪಾದಿಸಿದರೆ ಅದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು.  ಎನ್. ಆರ್. ಕುಲಕರ್ಣಿ ಅವರಂತೆ ಸಾಹಿತ್ಯದ ಕುರಿತು ಅಭಿರುಚಿ ಮತ್ತು ಒಳ್ಳೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರದಮಲ್ಲಿ ಸೇರಿರುವ ಎಲ್ಲ ಪೋಷಕರು ತಂತಮ್ಮ ಮಕ್ಕಳಿಗೆ ತಿಳಿ ಹೇಳಿ ಸಮಾಜ ಮುಖಿಯಾಗಿ ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ವಿಜಯಪುರದಲ್ಲಿ ಶ್ರೀ ಎನ್. ಆರ್. ಕುಲಕರ್ಣಿ ಅವರ ಬಕುಲ ಪುಷ್ಪ ಅಭಿನಂದನೆ ಗ್ರಂಥ ಬಿಡುಗಡೆ ಮತ್ತು ಗ್ರಂಥ ತುಲಾಭಾರ ಸಮಾರಂಭ ಉದ್ಘಾಟಿಸಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿದರು.

ನಾಗಣಸೂರು ಶ್ರೀ ಗುರು ಬಮ್ಮಲಿಂಗೇಶ್ವರ ಬೃಹನ್ಮಠದ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಎನ್. ಆರ್. ಕುಲಕರ್ಣಿ ಅವರು ವಸುದೈವ ಕುಟುಂಬಕಂ ಎನ್ನುವ ನಾಣ್ಣುಡಿಯಂತೆ ಸದ್ಗುಣ ಸಂಪನ್ನ, ಸಹೃದಯಿ ವ್ಯಕ್ತಿಯಾಗಿದ್ದಾರೆ.  ಅವರ ಕೈಯಲ್ಲಿ ನಾನು ವಿದ್ಯಾಭ್ಯಾಸ ಮಾಡಿದ್ದೇನೆ. ಅವರು ಎಲ್ಲರನ್ನು ಪ್ರೀತಿ ಮತ್ತು ಭಾವದಿಂದ ಸ್ನೇಹ ಭಾವದಿಂದ ನೋಡುವ ವ್ಯಕ್ತಿಯಾಗಿದ್ದಾರೆ.  ಈ ಬಕುಲ ಪುಷ್ಪ ಕೃತಿಗೆ ಅವರ ತಾಯಿಯ ಬಕುಲಾಬಾಯಿ ಹೆಸರು ಇಟ್ಟಿರುವದು ತಾಯಿಯ ಕುರಿತು ಅವರಿಗಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ನ್ಯಾಯವಾದಿ ಕೆ. ಎಫ್. ಅಂಕಲಗಿ ಮಾತನಾಡಿ, ಎನ್. ಆರ್. ಕುಲಕರ್ಣಿ ಅವರು ರಚಿಸಿದ ಬಕುಲ ಪುಷ್ಪ ಗ್ರಂಥದಲ್ಲಿ ಅವರು ಬೆಳೆದು ಬಂದ ಪರಿ, ಅನುಭವಿದ ಕಷ್ಟ- ಸುಖಗಳ ಕುರಿತು ಸವಿಸ್ತಾರವಾಗಿ ಮಾಹಿತಿ ಇದೆ.  ಇಂಥ ಆದರ್ಶಮಯ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.ಪುಸ್ತಕ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ಕೆ. ಕುಲಕರ್ಣಿ ಮಾತನಾಡಿ, ಮಣ್ಣಿಲ್ಲದೇ ಮಡಿಕೆ ಇಲ್ಲ.  ನಾವು ಮಾಡುವ ಕೆಲಸದಲ್ಲಿ ನಮ್ಮಲ್ಲಿ ಆತ್ಮಸ್ಥೆರ್ಯ ಇದ್ದರೆ ಸಾಧನೆ ಮಾಡಬಹುದು.  ಈ ಕಾರ್ಯಶಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು.  ಎನ್. ಆರ್. ಕುಲಕರ್ಣಿ ಅವರು ತಾಂಬಾದಲ್ಲಿ ಜನಿಸಿ, ಬೊಮ್ಮನಹಳ್ಳಿ, ಜೇರಟಗಿಯಲ್ಲಿ ವಿದ್ಯಾಭ್ಯಾಸ ಕಲಿತು ನಂತರ ತಮ್ಮ ಶಿಕ್ಷಕ ವೃತ್ತಿಯನ್ನು ಗಡಿನಾಡ ಪ್ರದೇಶವಾದ ನಾಗಣಸೂರದಲ್ಲಿ ಸುಮಾರು 36 ವರ್ಷಗಳ ಕಾಲ ತಮ್ಮ ಸೇವೆಯನ್ನು ಕನ್ನಡ ಮಾತೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಅವರ ತಾಯಿಯ ನಿರ್ಮಲವಾದ ಆರ್ಶೀವಾದ ಸೂಚ್ಯಕವಾಗಿ ಬಕುಲ ಪುಷ್ಪ ಗ್ರಂಥವಾಗಿದೆ ಎಂದು ಹೇಳಿದರು.

ವಿ. ಎಸ್. ಖಾಡೆ ಸ್ವಾಗತಿಸಿದರು.  ಡಾ. ಜಿ. ಡಿ. ಕೊಟ್ನಾಳ ಮತ್ತು ಎಸ್. ಬಿ. ಬಾಗೇವಾಡಿ ಪರಿಚಯಸಿದರು.  ಪ್ರೊ. ಯು. ಆರ್. ಕುಂಟೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಅಬಿನಂದನ ಗ್ರಂಥ ಸಂಪಾದಕ ಸಮಿತಿಯಿಂದ ಡಾ. ಅನುರಾಧಾ ಪ್ರವೀಣ ಜೋಶಿ, ಜಿ. ಆರ್. ಕುಲಕರ್ಣಿ, ಎಸ್. ಬಿ. ಬಾಗೇವಾಡಿ, ಎಸ್. ಎಂ. ಕಣಬೂರ, ಜಿ. ಎಸ್. ಕುಲಕರ್ಣಿ, ಶಂಕರ ಬಸವಪ್ರಭು(ಸಕ್ರಿ), ಸಿದ್ದಲಿಂಗಪ್ಪ ಹದಿಮೂರ, ಮೋಹನ ಪಿ. ಕುಲಕರ್ಣಿ, ಶಿವಪುತ್ರಪ್ಪ ಕೃಷ್ಣಮೂರ್ತಿ, ರುಕ್ಮಾಂಗದ ಅ. ಗುಡಿ, ಶ್ರೀಶೈಲ ಜಿ. ಮದಭಾವಿ, ಪಂಡಿರಾವ ಪಾಟೀಲ, ಸ್ಮೃತಿ ಮುಕುಂದ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ಮಂದಾಕಿನಿ ಬಿರಾದಾರ ಮತ್ತು ಸಂಗಡಿಗರು ವಚನ ಗಾಯ ಪ್ರಸ್ತುಪಡಿಸಿದರು.  ನ್ಯಾಯವಾದಿ ವಿದ್ಯಾವತಿ ಅಂಕಲಗಿ ನಿರೂಪಿಸಿ ವಂದಿಸಿದರು.

Leave a Reply

ಹೊಸ ಪೋಸ್ಟ್‌