ವಿಜಯಪುರ: ಬಿಜೆಪಿಯಲ್ಲಿ 20 ಬಣಗಳಿವೆ. ಒಂದೊಂದು ಬಣ ಒಂದೊಂದು ವಿಷಯ ಇಟ್ಟುಕೊಂಡು ಪಾದಯಾತ್ರೆ ಮಾಡಲಿ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಗೃಹಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಬಣ ಮತ್ತೋಂದು ಪಾದಯಾತ್ರೆ ನಡೆಸುವ ಕುರಿತು ಚರ್ಚಿಸುತ್ತಿದೆ ಎಂಬ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು ವ್ಯಂಗ್ಯವಾಗಿ ಉತ್ತರಿಸಿದರು.
ಬಿಜೆಪಿಯಲ್ಲಿ 20 ಬಣಗಳಿವೆ. ಆರ್. ಅಶೋಕ ಬಣ, ಬಿ. ವೈ. ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ ಬಣ, ಡಾ. ಸಿ. ಎನ್. ಅಶ್ವಥನಾರಾಯ ಬಣ, ಯತ್ನಾಳ ಮತ್ತು ಜಾರಕಿಹೋಳಿ ಬಣ, ಸಿ. ಟಿ. ರವಿ ಬಣ. ಹೀಗೆ 20 ಬಣಗಳಿವೆ. ಈಗಾಗಲೇ ಯತ್ನಾಳ ಅವರೇ ಬಿಜೆಪಿಯ ಭ್ರಷ್ಟಾಚಾರದ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳೂ ಕೂಡ ಮೊನ್ನೆ ಬಿಜೆಪಿಯ ಹಗರಣಗಳ ಪಟ್ಟಿ ಮಾಡಿದ್ದಾರೆ. ಹೀಗಾಗಿ ಬಿಜೆಪಿಯ ಒಂದೊಂದು ಬಣಗಳು ಒಂದೊಂದು ಹಗಣರಗಳ ವಿಷಯವಿಟ್ಟುಕೊಂಡು ಪ್ರತ್ಯೇಕ ಪಾದಯಾತ್ರೆ ಮಾಡಲಿ ಒಣ ಪಾದಯಾತ್ರೆ ಮಾಡಲಿ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರಕಾರ ಮತ್ತು ಸಿಎಂ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ವಿರುದ್ದವಾಗಿ ನಾವು ಜನಾಂದೋಲನ ಕಾರ್ಯಕ್ರಮ ಮಾಡಿದ್ದೇವೆ. ಐತಿಹಾಸಿಕ ಜನಾಂದೋಲನ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು. ಬಿಜೆಪಿ ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡಿದ್ದರು. ಜನಾಂದೋಲನ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.
ಮುಡಾ ಮತ್ತು ವಾಲ್ಮಿಕಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಜೆಡಿಎಸ್ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೊರೊನಾ ಸಂದರ್ಭದಲ್ಲಿ ರೂ. 2000 ಕೋ. ಹಣ ದುರುಪಯೋಗವಾಗಿದೆ. ಮಾರಿಷಸ್ ನಲ್ಲಿ ರೂ. 10 ಸಾವಿರ ಕೋ. ಹಣ ಇಟ್ಟಿದ್ದಾರೆ. ಭೋವಿ ನಿಗಮದ ಹಗರಣ, ತಾಂಡಾ ನಿಗಮದ ಹಗರಣ, ದೇವರಾಜಗ ಅರಸು ಟ್ರಕ್ ಟರ್ಮಿನಲ್ ಹಗರಣ, ಇಂಥ 20 ಹಗರಣಗಳ ಕುರಿತು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದು ವಾಗ್ದಾಳಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.
ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಜೈನ್, ಸಿಖ್ ಧರ್ಮದಂತೆ ಲಿಂಗಾಯಿತರಿಗೂ ಮೀಸಲಾತಿ ಸಿಗಲಿ
ಇದೇ ವೇಳೆ, ಹಿಂದೂ ಮತ್ತು ಲಿಂಗಾಯಿತ ಧರ್ಮಗಳು ಬೇರೆ ಎಂದು ಸ್ವಾಮೀಜಿಗಳು ನೀಡಿರುವ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೀರಶೈವ ಮಹಾಸಭಾದವರು ಈ ಕುರಿತು ದಾವಣಗೆರೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಮತ್ತು ಜಾತಿ ಕಾಲಂ ನಲ್ಲಿ ಜಾತಿಯ ಹೆಸರು ಬರೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ನಾನು ಮಾತನಾಡುವುದಿಲ್ಲ. ಜೈನ್ ಸಿಖ್ ಧರ್ಮದ ಪ್ರಕಾರ ನಮಗೂ ಎಲ್ಲ ಸೂಕ್ತ ಸ್ಥಾನಮಾನಗಳು ಮತ್ತು ಮೀಸಲಾತಿಗಳು ಸಿಗಬೇಕು. ನಾನು ಈ ಹಿಂದೆ ಲಿಂಗಾಯತ ಧರ್ಮದ ವಿಚಾರ ಮಾಡಿದಾಗ ಇದೇ ಮಹಾಸಭಾದವರು ಸೇರಿದಂತೆ ಇತರರು ಟೀಕೆ ಮಾಡಿದ್ದರು. ಈಗ ಧರ್ಮದ ಕುರಿತು ಮಹಾಸಭಾದವರು, ಧಾರ್ಮಿಕ ಮುಖಂಡರು ಹಾಗೂ ಇತರರ ನಿರ್ಧಾರ ಮಾಡುತ್ತಾರೆ. ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ. ಇಲ್ಲದಿದ್ದರೆ ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ. ಜೈನ ಮತ್ತು ಸಿಖ್ ರಂತೆ ಲಿಂಗಾಯತ ಎಲ್ಲ ಉಪ ಪಂಗಡಗಳಿಗೆ ಒಂದೇ ಸೂರಿನಡಿ ಕೇಂದ್ರ ಮತ್ತು ರಾಜ್ಯದಲ್ಲಿ ಮೀಸಲಾತಿ ಸಿಗಬೇಕು. ಒಂದೇ ಸೂರಿನಡಿ ಸಿಗಬೇಕು. ಒಕ್ಕಲಿಗರಿಗೆ ಸಿಕ್ಕ ಮಾದರಿಯಲ್ಲಿ ನಮಗೂ ಸಿಗಬೇಕು. ಒಕ್ಕಲಿಗರಿಗೆ ಸಿಕ್ಕಿದ್ದು ತಪ್ಪಲ್ಲ. ಅದಕ್ಕೆ ನಮ್ಮ ವಿರೋಧವಿಲ್ಲ. ಅದೇ ರೀತಿ ನಮಗೂ ಕೇಂದ್ರ ಮತ್ತು ರಾಜ್ಯದಲ್ಲಿ ಮೀಸಲಾತಿ ಸಿಗಬೇಕು ಎಂದು ಅವರು ಹೇಳಿದರು.
ಈ ಹಿಂದೆ ನಾವು ಈ ಕುರಿತು ಇಟ್ಟಿದ್ದ ಬೇಡಿಕೆ ಈಡೇರಿದ್ದರೆ ಇಂದು ನಮಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗತ್ತಿದ್ದವು. ಕೆ. ಪಿ. ಎಸ್. ಸಿ ಮತ್ತು ಯು. ಪಿ. ಎಸ್. ಸಿ, ಮೆಡಿಕಲ್ ಹಾಗೂ ಇತರೆಡೆ ಅವಕಾಶ ಸಿಗತ್ತಿದ್ದವು. ಆದರೆ ಎಲ್ಲೊಒಂದು ಕಡೆ ಲಿಂಗಾಯತ ಧರ್ಮದ ಕುರಿತು ಜನರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆ ಚುನಾವಣೆ ವಿಚಾರ
ಇದೇ ವೇಳೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣೆ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭೆ ಮೂರು ಕುಟುಂಬಗಳ ಆಸ್ತಿ ಎಂಬ ಯತ್ನಾಳ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಆರೋಪಕ್ಕೆ ನಾನು ಉತ್ತರಿಸುವುದಿಲ್ಲ. ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದೆ ಕುರಿತು ಮಾತನಾಡುವುದಿಲ್ಲ. ನಮ್ಮಅಜ್ಜ ಶಿರಸಂಗಿ ಲಿಂಗರಾಜರು ಅಖಿಲ ಭಾರತ ವೀರಶೈವ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಅಲ್ಲದೇ, ಎರಡನೇ ಬಾರಿಯೂ ಅಧ್ಯಕ್ಷರಾಗಿದ್ದರು. ಆದರೂ ಸಹ ಅದರ ಕಡೆ ನಾವು ತಿರುಗಿ ನೋಡಿಲ್ಲ. ಅವರು ಮಾಡಿಕೊಂಡು ಹೋಗುತ್ತಿದ್ದಾರೆ. ಎಲ್ಲರ ಹೊಂದಾಣಿಕೆ ಮಾಡಿಕೊಂಡು ಹೋಗಲಿ. ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.
ಬಿಎಸ್ವೈ ವಿರುದ್ಧ ಪೋಕ್ಸೋ ವಿಚಾರ
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ವಿಚಾರ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ವೈಯುಕ್ತಿಕವಾಗಿ ಮಾತನಾಡಲ್ಲ. ಈ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಎಲ್ಲವೂ ನಿರ್ಣಯವಾಗಲಿದೆ. ಈ ವಿಚಾರದಲ್ಲಿ ಗೃಹ ಸಚಿವರು ಸೂಚನೆ ನೀಡಿದ್ದಾರೆ ಎಂಬ ವಿಚಾರ
ವಿಚಾರ ನನಗೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ಮತ್ತು ನಿರ್ಧಾರ ಆಗುತ್ತದೆ. ಪೋಕ್ಸೋ ಕಠಿಣ ಕಾನೂನು ಆಗಿದೆ ಎಂದು ಅವರು ಹೇಳಿದರು.