ಬಿ.ಎಲ್.ಡಿ ಸೌಹಾರ್ದ ಈ ವರ್ಷ ರೂ. 500 ಕೋ. ವ್ಯವಹಾರ ಗುರಿ ಹೊಂದಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಸಂಘ(ಬ್ಯಾಂಕ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 500 ಕೋ. ವ್ಯವಹಾರದ ಗುರಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ಮುದ್ದೇಬಿಹಾಳ ಪಟ್ಟಣದಲ್ಲಿ ನೂತನ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಶತಮಾನದ ಸಂತ, ನಡೆದಾಡಿದ ದೇವರು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶಿರ್ವಾದದೊಂದಿಗೆ ಪ್ರಾರಂಭವಾದ ಬಿ.ಎಲ್‌.ಡಿ (ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್) ಸೌಹಾರ್ದ ಸಹಕಾರಿ ಸಂಘ ಬೆಂಗಳೂರು ಮಹಾನಗರ ಸೇರಿ ಉತ್ತರ ಕರ್ನಾಟಕದ ಪ್ರಮುಖ ಕೇಂದ್ರಗಳಲ್ಲಿ ಶಾಖೆ ತೆರೆಯಲು ಉತ್ಸುಕರಾಗಿದ್ದೇವೆ ಎಂದು ತಿಳಿದರು.

ಈವರೆಗೆ ಸಂಘ 9 ಶಾಖೆಗಳನ್ನು ಹೊಂದಿತ್ತು.  ಈಗ 10ನೇ ಶಾಖೆ ಪ್ರಾರಂಭವಾಗಿದೆ.  ಸೌಹಾರ್ದ ಕೇವಲ ಎರಡು ವರ್ಷಗಳಲ್ಲಿ ರೂ. 400 ಕೋ. ವ್ಯವಹಾರ ಮಾಡಿದ್ದು, ರೂ. 225 ಕೋ. ಠೇವಣಿ ಹೊಂದಿದೆ.  ರೂ. 150 ಕೋ. ಸಾಲ ನೀಡಲಾಗಿದೆ.  ಈ ಸಂಘದ ನಾನಾ ಶಾಖೆಗಳ ಮೂಲಕ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶವಿದೆ.  ವಿಶ್ವಾಸ, ನಂಬಿಕೆ ಉಳಿಸಿಕೊಂಡು ಗ್ರಾಹಕರಿಗೆ, ಷೇರುದಾರರಿಗೆ ಉತ್ತಮ ಸೌಲಭ್ಯ ಕೊಡಲು ಆಡಳಿತ ಮಂಡಳಿ ಬದ್ದವಾಗಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆಯನ್ನು ಕುಂಟೋಜಿ ಭಾವೈಕ್ಯತಾ ಮಠದ ಡಾ. ಶ್ರೀಗುರುಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.

ಸೌಹಾರ್ದದ ನಿರ್ದೇಶಕ ವಿಜಯಕುಮಾರ ಕನಮಡಿ ಮಾತನಾಡಿ,  ಬ್ಯಾಂಕು ಈವರೆಗೆ ಆಕರ್ಷಕ ಬಡ್ಡಿ ದರದಲ್ಲಿ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ರೂ. 175 ಕೋ. ಸಾಲ ನೀಡಿದೆ.  ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ವಿಕಲಚೇತನರಿಗೆ, ವಿಧವೆಯರರು ಈಡುವ ಠೇವಣಿಗೆ  ಶೇ. 0.5 ಹೆಚ್ಚುವರಿ ಬಡ್ಡಿ ಸೌಲಭ್ಯ ನೀಡಿ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತಿದೆ.  ಆರ್‌.ಟಿ.ಜಿ.ಎಸ್, ನೆಫ್ಟ್, ಹಣ ದ್ವಿಗುಣ ಇನ್ನಿತರ ಸೌಲಭ್ಯಗಳು ಲಭ್ಯವಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕುಂಟೋಜಿ ಭಾವೈಕ್ಯತಾ ಮಠದ ಡಾ. ಶ್ರೀಗುರುಚನ್ನವೀರ ಶಿವಾಚಾರ್ಯರು ಮಾತನಾಡಿ, ಬಸವಾದಿ ಶರಣರ ಆಶಯದಂತೆ ಸಚಿವ ಎಂ. ಬಿ. ಪಾಟೀಲ, ಎಂ.ಎಲ್‌.ಸಿ ಸುನೀಲಗೌಡ ಪಾಟೀಲ ಸಹೋದರರು ಸಮಾಜಕ್ಕೆ ಉಪಯೋಗಿಯಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ.  ಬಿ.ಎಲ್‌.ಡಿ.ಇ ಸಂಸ್ಥೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಮಾಡಿ ಈಗ ಸೌಹಾರ್ದ ಕ್ಷೇತ್ರಕ್ಕೂ ಕಾಲಿಟ್ಟಿ ಕಡಿಮೆ ಅವಧಿಯಲ್ಲಿ ಅಪಾರ ಸಾಧನೆ ಮಾಡಿರುವುದು ಸಂತಸ ಉಂಟು ಮಾಡಿದೆ.  ರೈತರು, ಬಡವರು, ಮಧ್ಯಮವರ್ಗದವರು, ಕೂಲಿಕಾರು ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಭದ್ರತೆ ಹೊಂದಬೇಕು.  ಇದಕ್ಕೆ ಆಡಳಿತ ಮಂಡಳಿ ನೆರವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡರಾದ ಸಿ. ಬಿ. ಅಸ್ಕಿ, ರಾಯನಗೌಡ ತಾತರಡ್ಡಿ, ಮುಖಂಡರಾದ ಸತೀಶಕುಮಾರ ಓಸ್ವಾಲ, ವೆಂಕನಗೌಡ ಪಾಟೀಲ, ಕಾಮರಾಜ ಬಿರಾದಾರ, ಎಸ್. ಎಸ್. ಮಾಲಗತ್ತಿ, ಸಂಗನಗೌಡ ಬಿರಾದಾರ(ಜಿಟಿಸಿ), ಎಂ. ಎಚ್. ಹಾಲಣ್ಣವರ, ಸುರೇಶಗೌಡ ಪಾಟೀಲ ಇಂಗಳಗೇರಿ, ರುದ್ರಗೌಡ ಅಂಗಡಗೇರಿ, ಅಪ್ಪು ದೇಗಿನಾಳ, ರಾಜು ಕರಡ್ಡಿ, ಸಿಕಂದರ್ ಜಾನ್ವೆಕರ್, ಅಶೋಕ ಇರಕಲ, ಎಸ್. ಎಸ್. ಪಾಟೀಲ, ಎಸ್. ಕೆ. ಗೊಂಗಡಿ, ವಿಜಯಕುಮಾರ ಜತ್ತಿ, ಸಿಇಒ ಸಿದ್ದಾರ್ಥ ಪಾಟೀಲ, ರಾಜು ಕನಕರೆಡ್ಡಿ, ಬಸವರಾಜ ಬಿರಾದಾರ, ಶ್ರೀಶೈಲರೆಡ್ಡಿ, ಜೆ. ಜೆ. ಶ್ರೀಕಾಂತ, ಶರಣಗೌಡ ಪಾಟೀಲ, ಗಣ್ಯರು, ಸಹಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌