ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು- ಡಾ. ಮಂಜುನಾಥ ಸಾವಂತ

ವಿಜಯಪುರ: ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದನ್ನು ಗುಣಪಡಿಸಬಹುದಾಗಿದೆ. ಇಲ್ಲದಿದ್ದರೆ ಅದು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಿ ಮೆದುಳಿಗೆ ಘಾಸಿಯಾಗಿ ಮಾರಣಾಂತಿಕವಾಗಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಸಾವಂತ ಹೇಳಿದ್ದಾರೆ.

ಶನಿವಾರ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಬಿ.ಎಲ್.ಡಿ.ಇ ಪಿಯು ಕಾಲೇಜಿನಲ್ಲಿ ಶ್ರೀ ಬಿ. ಎಂ. ಪಾಟೀಲ, ವೈದ್ಯಕೀಯ ಮಹಾವಿದ್ಯಾಲಯ, ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರೇಬಿಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಬಿಸ್ ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದ್ದು, ಈ ರೋಗ ಹರಡಲು ಲಿಸ್ಸಾವೈರಸ್ ಮುಖ್ಯ ಕಾರಣವಾಗಿದೆ. ನಾಯಿ, ಬೆಕ್ಕುಗಳ ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ ಹಾಗೂ ಸಸ್ತನಿಗಳು ಅದರಲ್ಲೂ ವಿಶೇಷವಾಗಿ ಕಾಡುಪ್ರಾಣಿಗಳ ಮೂಲಕ ಈ ಸೋಂಕು ಹರಡುತ್ತದೆ ಎಂದು ತಿಳಿಸಿದ ಅವರು, ರೇಬಿಸ್ ಕಾಯಿಲೆಯ ಹರಡುವಿಕೆ, ಅದನ್ನು ತಡೆಗಟ್ಟುವ ವಿಧಾನ, ಪ್ರಾಣಿ ಹಾಗೂ ಮನುಷ್ಯರಿಗೆ ಲಭ್ಯವಿರುವ ರೇಬೀಸ್ ಲಸಿಕೆಯ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಬಿ.ಎಲ್.ಡಿ.ಇ ಪಿಯು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದ ವಿಶ್ವ ರೇಬಿಸ್ ದಿನಾಚರಣೆಯಲ್ಲಿ ಡಾ. ಮಂಜುನಾಥ ಸಾವಂತ ಮಾತನಾಡಿದರು.

ಸಮುದಾಯ ವೈದ್ಯಕೀಯ ಕಾರ್ಯಕರ್ತ ಸಂಜೀವ ಖಾನಗೌಡ್ರ ಮಾತನಾಡಿ, ರೇಬಿಸ್ ರೋಗ ಬಂದ ನಂತರ ಪರದಾಡುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಮುಖ್ಯವಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ವಿಶ್ವ ರೆಬಿಸ್ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಈ ರೋಗದ ಕುರಿತು ಸಮುದಾಯದ ಜನರಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಿ.ಎಲ್. ಡಿ. ಇ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಎಸ್. ನಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ತೊದಲಬಾಗಿ, ವೈದ್ಯಕೀಯ ಸ್ನಾತಕೋತರ ವಿದ್ಯಾರ್ಥಿಗಳಾದ ಡಾ. ಈಶ್ವರ, ಡಾ. ಸ್ಮಿತ್, ಡಾ. ಶಮಿನ್, ಜಿ. ಬಿ. ಮನಗೂಳಿ, ಡಿ. ಬಿ ಚೆಣೆಗಾಂವ, ಡಿ. ಐ. ಮಠಪತಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌